ಅಲೀಗಢ: ಕುರಾನ್ ನಲ್ಲಿ ತ್ರಿವಳಿ ತಲಾಖ್ ಎಂಬ ಯಾವುದೇ ನಿಯಮಗಳಿಲ್ಲ. ಮೌಲಾನಾಗಳು, ಮೌಲ್ವಿಗಳ ಮಾತುಗಳನ್ನು ಕೇಳುವ ಬದಲು ಮುಸ್ಲಿಂ ಮಹಿಳೆಯರು ಸ್ವತಃ ಕುರಾನ್ ನ್ನು ಓದಿ ತಿಳಿದುಕೊಳ್ಳಬೇಕೆಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿಯವರು ಭಾನುವಾರ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ತ್ರಿವಳಿ ತಲಾಖ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮೌಲಾನಾಗಳು ಮೌಲ್ವಿಗಳು ಹೇಳಿದ್ದನ್ನೆಲ್ಲಾ ಕೇಳಬಾರದು. ಕುರಾತನ್ ನಲ್ಲಿ ತ್ರಿವಳಿ ತಲಾಖ್ ಎಂಬ ಯಾವುದೇ ನಿಯಮವಿಲ್ಲ.
ರಾಷ್ಟ್ರಾದ್ಯಂತ ತ್ರಿವಳಿ ತಲಾಖ್, ನಿಖಾ ಹಲಾಲ್ ಮತ್ತು ಬಹುಪತ್ನಿತ್ವ ಸಂಪ್ರದಾಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದ್ದು, ಮೌಲಾನಾ, ಮೌಲ್ವಿಗಳು ಹೇಳುವ ಮಾತುಗಳನ್ನು ಕೇಳುವ ಬದಲು ಎಲ್ಲಾ ಮುಸ್ಲಿಂ ಮಹಿಳೆಯರೂ ಸ್ವತಃ ಕುರಾನ್ ಓದಿ ತಿಳಿದುಕೊಳ್ಳಬೇಕು. ಆಗ ಸಮಸ್ಯೆಗೆ ಪರಿಹಾರಗಳು ಸಿಗುತ್ತದೆ. ಭಾಷಾಂತರಗೊಂಡ ಕುರಾನ್ ನ್ನು ಓದಬಾರದು. ಅರೇಬಿಕ್ ನಲ್ಲಿರುವ ಕುರಾನ್ ನ್ನು ಓದಬೇಕು. ಆಗ ಮಾತ್ರ ಕುರಾನ್ ನಲ್ಲಿ ಅಂತಹ ನಿಯಮಗಳಾವುದೂ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಎಂಬುದು ವಿಚಾರವೇ ಅಲ್ಲ. ಯಾರೋ ತಲಾಖ್...ತಲಾಖ್...ತಲಾಖ್... ಎಂದು ಹೇಳಿದಾಕ್ಷಣ ವಿಚ್ಛೇದನವಾಗುವುದಿಲ್ಲ. ಕುರಾನ್ ಓದಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕುರಾನ್ ನಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ. ಕೆಲವರು ಅಂತಹ ನಿಯಮಗಳನ್ನು ಹುಟ್ಟುಹಾಕುತ್ತಿದ್ದಾರೆ. ಕುರಾನ್ ಓದದ ಮಹಿಳೆಯರು ಇಂತಹ ನಿಯಮಗಳನ್ನು ಕಣ್ಣುಮುಚ್ಚಿಕೊಂಡು ನಂಬುತ್ತಾರೆ. ಹೀಗಾಗಿ ಮಹಿಳೆಯರು ಕುರಾನ್ ಓದುವ ಧೈರ್ಯವನ್ನು ಮಾಡಬೇಕು. ನಂತರ ಅದರಲ್ಲಿರುವ ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.