ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಿದ್ದ ಭಾರತೀಯ ಸೇನೆ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಆದರೆ, ಇದೀಗ ಆ ನೆಲೆಗಳು ಮತ್ತೆ ಸಕ್ರಿಯಗೊಂಡಿರುವುದಾಗಿ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವೆಂಬಂತೆ ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಸೆಪ್ಟೆಂಬರ್ 29ರಂದು ಸೀಮಿತ ದಾಳಿ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಸೀಮಿತ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಶತ್ರುತ್ವ ಮತ್ತಷ್ಟು ಹೆಚ್ಚಾಗುವಂತಾಗಿತ್ತು. ಇದಾದ ಬಳಿಕ ಭಾರತದ ಪಾಕಿಸ್ತಾನದ ಉಗ್ರರು ಒಂದಾದ ನಂತರ ಒಂದಂತೆ ದಾಳಿಗಳನ್ನು ನಡೆಸುತ್ತಲೇ ಇದೆ, ಈಗಲೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದ್ದು, ಗಡಿ ನುಸುಳಲು ಉಗ್ರರು ಸತತ ಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಸೇನಾ ಪಡೆಯ ಕಾರ್ಯ ಚಟುವಟಿಕೆಗಳು ಉಗ್ರರ ಯತ್ನಗಳನ್ನು ವಿಫಲವಾಗುವಂತೆ ಮಾಡುತ್ತಿದೆ.
ಸೇನಾ ಪಡೆ ಧ್ವಂಸಗೊಳಿಸಿದ್ದ ಉಗ್ರರ ನೆಲೆಗಳು ಇದೀಗ ಮತ್ತೆ ಸಕ್ರಿಯವಾಗಿದ್ದು, ಚಳಿಗಾಲ ಮುಗಿದ ಹಿನ್ನಲೆಯಲ್ಲಿ ಉಗ್ರರು ಭಾರತದೊಳಗೆ ನುಸುಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಬಾರಾಮುಲ್ಲಾದಲ್ಲಿರುವ 19ನೇ ಸೇನಾ ವಿಭಾಗದ ಮುಖ್ಯಸ್ಥ ಮೇಜರ್ ಆರ್.ಪಿ. ಕಲಿತಾ ಅವರು ಖಾಸಗಿ ಮಾಧ್ಯಮವೊಂದರ ಜೊತೆ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಚಳಿ ಕಡಿಮೆಯಾಗಿದ್ದು, ಹಿಮ ಕರಗುತ್ತಿದೆ. ಇದು ಉಗ್ರರನ್ನು ಕಾಶ್ಮೀರದೊಳಗೆ ಕಳುಹಿಸಲು ಪ್ರಶಸ್ತವಾದ ಸಮಯವೆಂದು ಗಡಿಯಾಚೆಯ ಉಗ್ರ ಸಂಘಟನೆಗಳು ಭಾವಿಸುತ್ತವೆ. ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯಲ್ಲಿ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು. ಇದೀಗ ಆ ಉಗ್ರ ಕ್ಯಾಂಪ್ ಗಳು ಮತ್ತೆ ಸಕ್ರಿಯಗೊಂಡಿವೆ. 9-10 ಉಗ್ರ ನೆಲೆಗಳು ಮತ್ತೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos