ದೇಶ

ಜಾಧವ್ ಬಿಡುಗಡೆಗೆ ಆಗ್ರಹ: ಪ್ರತಿಭಟನೆ ನಡೆಸಲು ದಲ್ಬೀರ್ ಕೌರ್ ನಿರ್ಧಾರ

Manjula VN
ಚಂಡೀಗಢ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಭಾರತೀಯ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಅವರು, ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 
ಪ್ರತಿಭಟನೆ ನಡೆಸಲು ಈಗಾಗಲೇ ಯೋಜನೆ ರೂಪಿಸಿರುವ ದಲ್ಬೀರ್ ಕೌರ್ ಅವರು ಜಾಧವ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದು, ಪಾಕಿಸ್ತಾನದ ವಿವಿಧ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಭಾರತೀಯರ ಕುಟುಂಬಸ್ಥರೊಂದಿಗೆ ಕೈಜೋಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಜಾಧವ್ ಅವರಿಗೆ ಪಾಕಿಸ್ತಾನ ಗಲ್ಲುಶಿಕ್ಷೆ ನೀಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಸೇನಾ ನ್ಯಾಯಾಲಯ ಜಾಧವ್ ಅವರಿಗೆ ಗಲ್ಲುಶಿಕ್ಷೆ ನೀಡಿರುವುದು ನನಗೆ ಆಶ್ಚರ್ಯವನ್ನೇನು ತಂದಿಲ್ಲ. ಸರಬ್ಜಿತ್ ಗೆ ವಿಷಯದಲ್ಲಿ ಆದದ್ದೇ ಇದೀಗ ಜಾಧವ್ ಅವರ ವಿಚಾರದಲ್ಲೂ ಆಘುತ್ತಿದೆ. ಜಾಧವ್ ಅವರನ್ನು ಇರಾನ್ ಬಂಡುಕೋರರು ಅಪಹರಿಸಿದ್ದರು. ಪಾಕಿಸ್ತಾನ ಅವರನ್ನು ಗೂಡಾಚಾರಿ ಎಂದು ಬಿಂಬಿಸಿತು ಎಂದು ಹೇಳಿದ್ದಾರೆ. 
ಪಾಕಿಸ್ತಾನ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ನೋಡುವುದಿಲ್ಲ. ಎಲ್ಲವನ್ನೂ ಅವರ ಅಗತ್ಯಕ್ಕೆ ತಕ್ಕಂತೆ ಸೃಷ್ಟಿಸುತ್ತಾರೆ. ಪಾಕಿಸ್ತಾನೀಯರ ಹೃದಯಲ್ಲಿ ಯಾವಾಗಲೂ ಬೆಂಕಿಯಾಡುತ್ತಿರುತ್ತದೆ. ಭಾರತೀಯರ ಜೊತೆ ಅವರು ಉತ್ತಮವಾಗಿ ನಡೆದುಕೊಳ್ಳುವುದಿಲ್ಲ. ನಾವು ಉತ್ತಮ ಸಂಬಂಧ ಹಾಗೂ ಶಾಂತಿಯುತವಾಗಿ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಆದರೆ, ಅವರು ನಮ್ಮಂತೆಯೇ ಮಾತನಾಡುವುದಿಲ್ಲ. ಗಡಿಯಲ್ಲಿ ಪಾಕಿಸ್ತಾನೀಯರು ದೊರೆತಾಗ ನಾವು ಅವರಿಗೆ ಒಪ್ಪಿಸುತ್ತೇವೆ. ಆದರೆ, ಅವರು ಆ ರೀತಿ ಮಾಡುವುದಿಲ್ಲ ಎಂದಿದ್ದಾರೆ. 
ಜಾಧವ್ ಅವರ ಬಿಡುಗಡೆಗೆ ಆಗ್ರಹಿಸಿ ನಾನು ಭಿಕಿವಿಂಡ್ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದೇನೆ. ಈ ಮೂಲಕ ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯರ ಕುಟುಂಬಸ್ಥರಿಗೂ ಪ್ರತಿಭಟನೆಗೆ ಕೈಜೋಡಿಸುವಂತೆ ಸಂದೇಶವನ್ನು ರವಾನಿಸುತ್ತಿದ್ದೇನೆ. ನಮ್ಮ ಪ್ರತಿಭಟನೆ ಹಾಗೂ ದನಿ ಮೂಲಕ ವಿಚಾರವನ್ನು ವಿಶ್ವಸಂಸ್ಥೆಯ ಗಮನಕ್ಕೆ ತರುತ್ತೇನೆ. ಇದಲ್ಲದೆ, ದೆಹಲಿಯಲ್ಲಿಯೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಜಾಧವ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಲು ನಾನು ಪ್ರಯತ್ನಿಸುತ್ತಿದ್ದೇನೆಂದು ತಿಳಿಸಿದ್ದಾರೆ. 
SCROLL FOR NEXT