ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡ ಕುಮಾರ್ ವಿಶ್ವಾಮ ಹಾಗೂ ನನ್ನ ಯಾವುದೇ ಯಾವುದೇ ವೈಮನಸ್ಸಿಲ್ಲ, ಕುಮಾರ್ ವಿಶ್ವಾಸ್ ಮನೆಯ ಕುಟುಂಬ ಸದಸ್ಯರಿದ್ದಂತೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆಷ್ಟೇ ಅರವಿಂದ್ ಕೇಜ್ರಿವಾಲ್ ಟಿವಿಯೊಂದಕ್ಕೆ ನೀಡಿದ್ದ ಸಂದರ್ಶನದ ವಿಡಿಯೋವೊಂದನ್ನು ಕುಮಾರ್ ವಿಶ್ವಾಸ್ ಅವರು ಟ್ವೀಟ್ ಮಾಡಿದ್ದರು. ವಿಡಿಯೋದಿಂದ ಕೇಜ್ರಿವಾಲ್ ಅವರ ಬಗ್ಗೆ ಟೀಕೆಗಳು ಎದುರಾಗಿದ್ದವು. ಹೀಗಾಗಿ ಕೇಜ್ರಿವಾಲ್ ಹಾಗೂ ಕುಮಾರ್ ವಿಶ್ವಾಸ್ ಮಧ್ಯೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಜ್ರಿವಾಲ್ ಅವರು, ಕುಮಾರ್ ವಿಶ್ವಾಸ್ ಅವರ ಮೇಲೆ ನನಗೆ ಕೋಪವಿಲ್ಲ. ಕುಮಾರ್ ಅವರು ಪಕ್ಷದ ಸದಸ್ಯನಷ್ಟೇ ಅಲ್ಲ, ಅವರು ನನ್ನ ಮನೆಯ ಸದಸ್ಯನಿದ್ದಂತೆ. ಮಾಧ್ಯಮಗಳು ನಮ್ಮಿಬ್ಬರ ವಿಷಯವಾಗಿ ಇದೇ ರೀತಿ ಚರ್ಚೆ ಮಾಡಿದರೆ, ಇದನ್ನು ನಂಬಿ ಮುಂದೆ ನೀವುಗಳು ನನ್ನ ಪತ್ನಿಯೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾಳೆಂದು ಬೇಕಾದರೂ ಹೇಳುವಿರಿ ಎಂದು ಹಾಸ್ಯ ಮಾಡಿದ್ದಾರೆ.