ನವದೆಹಲಿ: ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಪ್ರಕರಣದ ನಂತರ ವಿಮಾನದಲ್ಲಿ ಅಶಿಸ್ತಿನಿಂದ ನಡೆದುಕೊಳ್ಳುವ ಪ್ರಯಾಣಿಕರ ಆಟಾಟೋಪವನ್ನು ನಿಯಂತ್ರಿಸುವುದಕ್ಕೆ ಏರ್ ಇಂಡಿಯಾ ಹಾಗೂ ಭಾರತ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ರೂಪಿಸುತ್ತಿವೆ.
ದುರ್ವರ್ತನೆ ತೋರಿ, ವಿಮಾನ ವಿಳಂಬ ಮಾಡುವ ಪ್ರಯಾಣಿಕರಿಗೆ 15 ಲಕ್ಷ ರೂ ದಂಡ ವಿಧಿಸುವ ಬಗ್ಗೆ ಏರ್ ಇಂಡಿಯಾ ಚಿಂತನೆ ನಡೆಸಿದ್ದು ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ಎದುರಿಸಲು ವಿಮಾನ ನಿಲ್ದಾಣದ ಮ್ಯಾನೇಜರ್ ಗಳಿಗೆ ಹೆಚ್ಚಿನ ಅಧಿಕಾರ ನೀಡುವುದು ಹೊಸ ನಿಯಮಗಳ ಪೈಕಿ ಪ್ರಮುಖವಾದ ಅಂಶವಾಗಿದೆ. ಪ್ರಯಾಣಿಕರ ಅಶಿಸ್ತಿನ ವರ್ತನೆಯನ್ನು ವರದಿ ಮಾಡುವುದಕ್ಕೆ ಹಾಗೂ ದುರ್ವರ್ತನೆ ತೋರುವ ಪ್ರಯಾಣಿಕರಿಂದ ಹಣಕಾಸು ಪರಿಹಾರವನ್ನು ಪಡೆಯುವುದನ್ನೂ ಕಠಿಣ ನಿಯಮಗಳ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ಮಾರ್ಗಸೂಚಿಗಳ ನಿಯಮಗಳನ್ನು ಏರ್ ಇಂಡಿಯಾದ ಕಾನೂನು ವಿಭಾಗದ ಸಲಹೆ ಪಡೆದು ರೂಪಿಸಲಾಗಿದ್ದು, ಸಿಎಂಡಿ ಅಶ್ವಿನಿ ಲೋಹನಿ ಅವರಿಗೆ ಕಳಿಸಿಕೊಡಲಾಗಿದೆ ಏರ್ ಇಂಡಿಯಾದ ಸಿಎಂಡಿ ಅನುಮೋದನೆ ನೀಡಿದ ಬಳಿಕ ಸಾರ್ವಜನಿಕಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿಯಮಗಳ ಪ್ರಕಾರ ದುರ್ವರ್ತನೆ ತೋರುವ ಯಾವುದೇ ಪ್ರಯಾಣಿಕನ ವಿರುದ್ಧ ಕ್ರಮ ಕೈಗೊಳ್ಳಲು ಮ್ಯಾನೇಜರ್ ಗಳು ಚೇರ್ ಮನ್ ಹಾಗೂ ಎಂಡಿಯ ಅನುಮತಿ ಪಡೆಯಬೇಕಿಲ್ಲ. ಬದಲಾಗಿ ನೇರವಾಗಿ ಕ್ರಮ ಕೈಗೊಳ್ಳಬಹುದೆಂಬ ಅಂಶವನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ದುರ್ವರ್ತನೆಯಿಂದಾಗಿ ವಿಮಾನಗಳು ಟೇಕ್ ಆಫ್ ಆಗುವುದು ವಿಳಂಬವಾದರೆ ಅದರಿಂದ ಉಂಟಾಗುವ ನಷ್ಟವನ್ನೂ ಆ ಪ್ರಯಾಣಿಕನೇ ಭರಿಸಬೇಕಾಗುತ್ತದೆ ಎಂಬ ಹತ್ತು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos