ಶ್ರೀನಗರ: ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿಗಳ ಗುಂಡಿಗೆ ಯುವಕನೋರ್ವ ಬಲಿಯಾದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್), ಗಾಳಿಯಲ್ಲಿ ಗುಂಡು ಹಾರಿಸಬೇಕಾದರೆ ಶ್ರೀನಗರದ ಯುವಕನ ಸಾವು ಸಂಭವಿಸಿದೆ ಎಂದು ಸ್ಪಷ್ಟನೆ ನೀಡಿದೆ.
ಬಟ್ಮಲೂ ಪ್ರದೇಶದಲ್ಲಿ ಕಾಶ್ಮೀರಿ ಪುಂಡರು ಸೇನಾ ಸಿಬ್ಬಂದಿಗಳ ಮೇಲೆ ತೀವ್ರವಾಗಿ ಕಲ್ಲುತೂರಾಟ ನಡೆಸುತ್ತಿದ್ದರು. ಅಷ್ಟೇ ಅಲ್ಲದೇ ಈ ಪೈಕಿ ಕೆಲವರು ಸೇನಾ ಸಿಬ್ಬಂದಿಗಳ ಸರ್ವೀಸ್ ರೈಫಲ್ ನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿಗಳು ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಈ ವೇಳೆ ಆಕಸ್ಮಿಕವಾಗಿ ಶ್ರೀನಗರದ ಯುವಕ ಮೃತಪಟ್ಟಿದ್ದಾನೆ ಎಂದು ಬಿಎಸ್ಎಫ್ ಹೇಳಿದೆ.
ಘಟನೆ ಕುರಿತ ಪೊಲೀಸ್ ತನಿಖೆಗೆ ಸಹಕಾರ ನೀಡುವುದಾಗಿ ಬಿಎಸ್ ಎಫ್ ಭರವಸೆ ನೀಡಿದೆ. ಸೇನಾ ಸಿಬ್ಬಂದಿಗಳ ಸರ್ವೀಸ್ ರೈಫಲ್ ನ್ನು ಕಸಿದುಕೊಳ್ಳಲು ಯತ್ನಿಸಿದವರನ್ನು ಚದುರಿಸಲು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಆದರೆ ಸೇನಾ ಸಿಬ್ಬಂದಿಗಳಿಗೆ ಯಾರನ್ನೂ ಕೊಲ್ಲುವ ಉದ್ದೇಶ ಇರಲಿಲ್ಲ. ಸಜದ್ ಹಸನ್ ನ ಸಾವಿಗೆ ಕಾರಣವಾದ ಫೈರಿಂಗ್ ಬಗ್ಗೆ ಆಂತರಿಕ ತನಿಖೆಯನ್ನೂ ಪ್ರಾರಂಭಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.