ಲಖನೌ: ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಕನಸಿನ ಯೋಜನೆಯಾದ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಗೆ ಚಾಲನೆ ನೀಡಿದ್ದರು. ಇದೀಗ ಆ ಯೋಜನೆಯಲ್ಲಿ ಅಕ್ರಮದ ಆರೋಪ ಕೇಳಿ ಬಿಂದಿದ್ದು, ಯೋಗಿ ಆದಿತ್ಯನಾಥ್ ಸರ್ಕಾರ ತನಿಖೆಗೆ ಆದೇಶಿಸಿದೆ.
ಯೋಜನೆಗಾಗಿ ವಶಪಡಿಸಿಕೊಳ್ಳಲಾದ ಕೃಷಿ ಭೂಮಿಯನ್ನು ಹೆಚ್ಚಿನ ಪರಿಹಾರಕ್ಕಾಗಿ ವಸತಿ ಪ್ರದೇಶವಾಗಿ ಮಾರ್ಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ 10 ಜಿಲ್ಲಾ ಮ್ಯಾಜಿಸ್ಟ್ರೇಟರ್ ಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸುಮಾರು 230 ಗ್ರಾಮಗಳಲ್ಲಿ ಕಳೆದ 18 ತಿಂಗಳಿಂದ ನಡೆದ ಭೂ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ 10 ಜಿಲ್ಲೆಗಳ ಮ್ಯಾಜಿಸ್ಟ್ರೇಟರ್ ಗಳಿಗೆ ಸೂಚಿಸಲಾಗಿದೆ.
ಉತ್ತರ ಪ್ರದೇಶ ಎಕ್ಸ್ ಪ್ರೆಸ್ ಹೆದ್ದಾರಿ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ(ಯುಪಿಇಐಡಿಎ)ದ ವಿಶೇಷ ಭೂ ಅಧಿಕಾರಿ ವೈ ಎನ್ ಲಾಲ್ ಅವರು ವಸತಿ ಉದ್ದೇಶಕ್ಕಾಗಿ ಕೃಷಿ ಭೂಮಿ ತೋರಿಸಿದ ಆರೋಪದ ಮೇಲೆ ಐವರು ಚೆಕ್ ಬಂಧಿ ಅಧಿಕಾರಿಗಳ ಹಾಗೂ 22 ಭೂ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಚುನಾವಣೆ ವೇಳೆ ಅಖಿಲೇಶ್ ಯಾದವ್ ಅವರು ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಅತಿ ಕಡಿವೆ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಇದು ನನ್ನ ಕನಸಿನ ಯೋಜನೆ ಎಂದು ಹೇಳಿದ್ದರು.
302 ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ಐಎಎಫ್ ಯುದ್ಧ ವಿಮಾನ ಇಳಿಯುವ ಸೌಲಭ್ಯ ಹೊಂದಿದ್ದು, ತುರ್ತು ಪರಿಸ್ಥಿತಿಯಲ್ಲಿ ಭಾರತೀಯ ಸೇನೆ ಈ ಹೆದ್ದಾರಿಯನ್ನು ತಾತ್ಕಾಲಿಕ ರನ್ ವೇ ಆಗಿ ಕೂಡ ಬಳಕೆ ಮಾಡಬಹುದಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos