ಕಾಂಗ್ರೆಸ್ ಪಕ್ಷದ ನಾಯಕ ಅಜಯ್ ಮಾಕೇನ್
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದ್ದು, ಸೋಲಿನ ಹೊಣೆ ಹೊತ್ತು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೇನ್ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜಿನಾಮೆಯನ್ನು ನೀಡಿದ್ದಾರೆ.
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಬೀತು ಪಡಿಸಿದ್ದು, ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಮೂರನೇ ಸ್ಥಾನ ಪಡೆದುಕೊಂಡಿದ್ದು, ಹೀನಾಯ ಸೋಲು ಕಂಡಿದೆ.
ಈ ಹಿನ್ನಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತಿರುವ ಅಜಯ್ ಮಾಕೇನ್ ಅವರು, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದಾರೆ.
ರಾಜಿನಾಮೆ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ಕಾಂಗ್ರೆಸ್ ಮರುಜೀವನವಾಗಿತ್ತು. ಈ ಮಟ್ಟಕ್ಕೆ ಫಲಿತಾಂಶ ಬರುತ್ತದೆ ಎಂದು ತಿಳಿದಿರಲಿಲ್ಲ. ನಿರೀಕ್ಷಿಸಿದ್ದಷ್ಟು ಫಲಿತಾಂಶ ಬಂದಿಲ್ಲ. ಹೀಗಾಗಿ ದೆಹಲಿ ಕಾಂಗ್ರೆಸ್ ಅಧ್ಯಕ್ಷನಾಗಿ ಸೋಲಿನ ಹೊಣೆ ಹೊತ್ತು ನನ್ನ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದೇನೆ ರಾಜಿನಾಮೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್'ನ ಶೇಕಡಾವಾರು ಮತ ಸಂಖ್ಯೆ ಹೆಚ್ಚಿದೆ. ಧನಾತ್ಮಕ ವಿಚಾರಗಳ ಬಗ್ಗೆ ನಾವು ಹೋರಾಟ ಮಾಡಿದ್ದೆವು. ಚುನಾವಣೆ ವೇಳೆ ಸರಿಯಾದ ವಿಷಯಗಳ ಬಗ್ಗೆ ದನಿಯೆತ್ತಿದ್ದು ನಮಗೆ ತೃಪ್ತಿ ತಂದಿತ್ತು. ಎರಡು ವರ್ಷಗಳ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರವಾದಿಯಲ್ಲಿ ನನಗೆ ಮುಕ್ತ ಕೈಗಳನ್ನು ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವ ಹಿನ್ನಲೆಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆ ಪ್ರಚಾರ ವೇಲೆ ಕಾಂಗ್ರೆಸ್ ಆಕ್ರಮಣಕಾರಿಯಾದ ರೀತಿಯಲ್ಲಿ ಪ್ರಚಾರವನ್ನು ನಡೆಸಿರಲಿಲ್ಲ. ಜನರನ್ನು ಸಂಪರ್ಕಿಸುವಲ್ಲಿ ಅಜಯ್ ಮಕೇನ್ ಅವರು ವಿಫಲಾಗಿದ್ದಾರೆ. ಸ್ಥಳೀಯ ನಾಯಕತ್ವದಲ್ಲಿ ಅಜಯ್ ಮಾಕೇನ್ ಅವರು ಸರಿಯಾದ ರೀತಿಯಲ್ಲಿ ಪಾಲ್ಗೊಂಡಿಲ್ಲ ಹೀಗಾಗಿ ಈ ಫಲಿತಾಂಶ ಬಂದಿದೆ ಎಂದು ಹೇಳಿದ್ದರು.
ಶೀಲಾ ದೀಕ್ಷಿತ್ ಅವರು ಈ ರೀತಿ ಹೇಳಿಕೆ ನೀಡಿದ ಬೆನ್ನಲ್ಲೇ ಅಜಯ್ ಮಾಕೇನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದಾರೆ.