ಬಾಲಿವುಡ್ ಖ್ಯಾತ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ
ನವದೆಹಲಿ: ಬಾಲಿವುಡ್ ಖ್ಯಾತ ನಟ ಹಾಗೂ ಬಿಜೆಪಿ ಸಂಸದ ವಿನೋದ್ ಖನ್ನಾ ಅವರು ವಿಧಿವಶರಾಗಿದ್ದು, ಈ ಹಿನ್ನಲೆಯಲ್ಲಿ ರಾಜಕೀಯ ವಲಯದ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಿನೋದ್ ಖನ್ನಾ ನಿಧರನ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಶ್ರೀ ವಿನೋದ್ ಖನ್ನಾ ಅವರು ಚಲನಚಿತ್ರಗಳು ಮತ್ತು ರಾಜಕೀಯದಲ್ಲಿ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದರು ಎಂದು ಹೇಳಿದ್ದಾರೆ.
ವಿನೋದ್ ಖನ್ನಾ ಅವರ ಅಗಲಿಕೆಯಿಂದಾಗಿ ಭಾರತ ಅದ್ಭುತ ನಟ ಹಾಗೂ ಸೂಕ್ಷ್ಮವಾದ ರಾಜಕೀಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದು, ವಿನೋದ್ ಖನ್ನಾ ಅಗಲಿಕೆಯಿಂದಾಗಿ ನೋವಾಗಿದೆ. ವಿನೋದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ವಿನೋದ್ ಖನ್ನಾ ಜೀ ಅದ್ಭುತ ನಟ ಹಾಗೂ ಉತ್ತಮ ರಾಜಕೀಯ ನಾಯಕರಾಗಿದ್ದು, ಅವರನ್ನು ಎಂದಿಗೂ ನೆನೆಯುತ್ತಿರುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಮಾತನಾಡಿ, ವಿನೋದ್ ಖನ್ನಾ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಪ್ರತಿಭಾನ್ವಿತ ನಟನನ್ನು ನೆನೆಯುತ್ತೇವೆಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ವಿನೋದ್ ಖನ್ನಾ ಅವರ ಅಗಲಿಕೆಯಿಂದಾಗಿ ಬಹಳ ನೋವಾಗಿದೆ. ಜೀವನದ ಅಂತಿಮ ಕ್ಷಣೆಗಳನ್ನೂ ತಮ್ಮ ಕ್ಷೇತ್ರದ ಜನರ ಸೇವೆಗಾಗಿ ಕಳೆದಿದ್ದರು. ಖನ್ನಾ ಅವರು ಶ್ರಮಜೀವಿ ಹಾಗೂ ಕರ್ತವ್ಯಕ್ಕೆ ಬದ್ಧರಾದ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಚಿತ್ರರಂಗಕ್ಕೆ ಹಾಗೂ ರಾಜಕೀಯ ವಲಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos