ನವದೆಹಲಿ: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇಪದೆ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ನರ್ಮದಾ ಬಚಾವ್ ಅಂದೋಲನ(ಎನ್ ಬಿಎ)ದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ದೆಹಲಿ ಕೋರ್ಟ್ ಗುರುವಾರ 10 ಸಾವಿರ ರುಪಾಯಿ ದಂಡ ವಿಧಿಸಿದೆ.
ಮೇಧಾ ಪಾಟ್ಕರ್ ಹಾಗೂ ಕೆವಿಐಸಿ ಮುಖ್ಯಸ್ಥ ವಿ.ಕೆ. ಸಕ್ಸೇನಾ ಅವರು ಪರಸ್ಪರ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ವಿಕ್ರಾಂತ್ ಅವರು, ಪಾಟ್ಕರ್ ಗೆ ಕೊನೆಯದಾಗಿ ಒಂದು ಅವಕಾಶ ನೀಡಿದ್ದು, ಈ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ಅವರ ಅರ್ಜಿ ವಜಾಗೊಳಿಸುವುದು ಎಚ್ಚರಿಕೆ ನೀಡಿದ್ದಾರೆ.
ಜೂನ್ 26ರಂದು ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದ ಕೋರ್ಟ್, ವಿಚಾರಣೆಗೆ ಹಾಜರಾಗದ ಕಾರಣ ಮೇ 29ರಂದು ಮೇಧಾ ಪಾಟ್ಕರ್ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರಂಟನ್ನು ಹಿಂಪಡೆದಿತ್ತು.
ಅಹಮದಾಬಾದ್ ಮೂಲದ ಎನ್ ಜಿಒ ಸಂಸ್ಥೆಯ ಅಧ್ಯಕ್ಷ ವಿ ಕೆ ಸಕ್ಸೇನಾ ಹಾಗೂ ಮೇಧಾ ಪಾಟ್ಕರ್ ಮಧ್ಯ ಕಳೆದ 17 ವರ್ಷಗಳಿಂದ ಕಾನೂನು ಸಮರ ನಡೆಯುತ್ತಿದೆ. ತಮ್ಮ ಹಾಗೂ ಎನ್ ಬಿಎ ವಿರುದ್ಧ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದು ಮೇಧಾ ಪಾಟ್ಕರ್ ಪ್ರಕರಣ ದಾಖಲಿಸಿದ್ದರೆ, ಅವರ ವಿರುದ್ಧ ಸಕ್ಷೇನಾ ಸಹ ಎರಡು ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದಾರೆ.