ಕೇರಳ ರಾಜಕೀಯ ಹಿಂಸಾಚಾರ: ಹತ್ಯೆಯಾದ ಆರ್'ಎಸ್ಎಸ್ ಕಾರ್ಯಕರ್ತನ ಮನೆಗೆ ಜೇಟ್ಲಿ ಭೇಟಿ
ತಿರುವನಂತಪುರ: ಕೇರಳ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದ ಆರ್'ಎಸ್ಎಸ್ ಕಾರ್ಯಕರ್ತ ಎಸ್.ಎಲ್ ರಾಜೇಶ್ ಅವರ ಮನೆಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಭಾನುವಾರ ಭೇಟಿ ನೀಡಿದ್ದು, ಸಾಂತ್ವನ ಹೇಳಿದ್ದಾರೆ.
ಇಂದು ಬೆಳಿಗ್ಗೆ 11.15ರ ಸುಮಾರಿಗೆ ಕೇರಳ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಜೇಟ್ಲಿಯವರನ್ನು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನ್ನಮ್ ರಾಜಶೇಖರ್, ರಾಜೀನಾ ಚಂದ್ರಶೇಖರ್, ಒ. ರಾಜಗೋಪಾಲ್, ವಿ ಮುರಳೀಧರನ್, ಎಂ.ಟಿ ರಮೇಳ್ ಮತ್ತು ಮಾಜಿ ಕೇಂದ್ರ ಸಚಿವ ಪಿ.ಸಿ. ಥಾಮಸ್ ಅವರು ಸ್ವಾಗತಿಸಿದರು.
ನಂತರ ಇತ್ತೀಗಷ್ಟೇ ಸಿಪಿಎಂ ಕಾರ್ಯಕರ್ತರಿಂದ ಹತ್ಯೆಗೀಡಾದ ಆರ್'ಎಸ್ಎಸ್ ಕಾರ್ಯಕರ್ತ ರಾಜೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಜೇಟ್ಲಿಯವರು ಕೆಲ ಸಮಯ ಕಳೆದರು. ಈ ವೇಳೆ ರಾಜೇಶ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶತ್ರುಗಳೂ ಕೂಡ ಇಷ್ಟೊಂದು ಕ್ರೂರವಾಗಿರುವುದಿಲ್ಲ; ಜೇಟ್ಲಿ
ಆರ್'ಎಸ್ಎಸ್ ಕಾರ್ಯಕರ್ತ ರಾಜೇಶ್ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಮಾತನಾಡಿರುವ ಜೇಟ್ಲಿಯವರು, ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಶತ್ರುಗಳೂ ಕೂಡ ಇಷ್ಟೊಂದು ಕ್ರೂರವಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಹತ್ಯೆಯಾದ ಕಾರ್ಯಕರ್ತನ ಕುಟುಂಬಸ್ಥರನ್ನು ಭೇಟಿ ಮಾಡಿದೆ. ಕಾರ್ಯಕರ್ತರಿಗೆ ರಾಜೇಶ್ ಒಬ್ಬ ಮಾದರಿಯಾಗಿದ್ದ. ಈ ರೀತಿಯ ಹಿಂಸಾಚಾಗಳು ಪಕ್ಷದ ಸಿದ್ದಾಂತಗಳನ್ನು ಕುಗ್ಗಿಸುವುದಿಲ್ಲ. ಕಾರ್ಯಕರ್ತರು ಇದರಿಂದ ಹೆದರುವುದೂ ಇಲ್ಲ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರವವರ ವಿರುದ್ಧ ಹೋರಾಡಲು ಕಾರ್ಯಕರ್ತರಲ್ಲಿರುವ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ರಾಜೇಶ್ ಬಡ ಕುಟುಂಬಕ್ಕೆ ಸೇರಿದವನಾಗಿದ್ದ. ರಾಜೇಶ್ ನನ್ನು ಕಳೆದುಕೊಂಡ ಬಳಿಕ ಅವರ ಕುಟುಂಬದ ಜೀವನೋಪಾಯಕ್ಕೆ ಯಾವುದೇ ಆಧಾರಗಳೂ ಇಲ್ಲ. ಶತ್ರುಗಳೂ ಕೂಡ ಇಂತಹ ಕೃತ್ಯಗಳನ್ನು ಎಸಗುವುದಿಲ್ಲ. ನಿಷ್ಕರುಣಿಯಾಗಿ ಭೀಕರವಾಗಿ ರಾಜೇಶ್ ಅವರನ್ನು ಹತ್ಯೆ ಮಾಡಲಾಗಿದೆ. ದೇಹದ ಮೇಲೆ 70-80 ಇರಿತದ ಗಾಯಗಳಾಗಿವೆ. ಕೆಲ ತಿಂಗಳುಗಳಿಂದ ಪಕ್ಷದ ಅಧಿಕಾರಿಗಳ ಮೇಲೂ ದಾಳಿಗಳನ್ನು ನಡೆಸಲಾಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗುತ್ತಿದೆ. ಅವರ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos