ಮೋಸ್ಟ್ ವಾಂಟೆಡ್ ಉಗ್ರ ಝಾಕೀರ್ ಮುಸಾ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನಾಪಡೆ ಉಗ್ರರ ವಿರುದ್ಧ ಪ್ರತೀಕ್ಷಣ ಸೆಣಸಾಡುತ್ತಿದ್ದರೂ, ಉಗ್ರರಿಗೆ ಒದಗುತ್ತಿರುವ ಸ್ಥಳೀಯ ಸಹಾಯ ಮಾತ್ರ ನಿಲ್ಲುತ್ತಿಲ್ಲ.
ನಿನ್ನೆಯಷ್ಟೇ ತ್ರಾಲ್ ನಲ್ಲಿರುವ ನೂರ್ಪೊರಾದ ಮನೆಯೊಂದಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಝಾಕೀರ್ ಮುಸಾ ಹಾಗೂ ಮತ್ತೆ 2-3 ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ಸೇನಾಪಡೆಗಳಿಗೆ ದೊರಕಿತ್ತು. ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಉಗ್ರರು ಪರಾರಿಯಾಗುವ ಯತ್ನ ಸಫಲಗೊಳ್ಳಬಾರದೆಂದು ಪೀರ್ ಮೊಹಲ್ಲಾ, ಶಾಹ್ ಮೊಹಲ್ಲಾ, ದಗ್ಗರ್ಪೊರಾ ಮತ್ತು ನೂರ್ಪೊರಾ ಗ್ರಾಮಗಳನ್ನು ಸೇನಾಪಡೆ ಸುತ್ತುವರೆದಿತ್ತು.
ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಕೆಲ ಸ್ಥಳೀಯರು ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಉಗ್ರರು ಸ್ಥಳದಿಂದ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಝಾಕೀರ್ ಮುಸಾ ಸೇರಿದಂದೆ ಅಲ್ ಖೈದಾ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 2-3 ಉಗ್ರರು ಅಡಗಿ ಕುಳಿತಿರವುದಾಗಿ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ 42 ರಾಷ್ಟ್ರೀಯ ರೈಫಲ್ಸ್ ಪಡೆ, 130 ಸಿಆರ್'ಪಿಎಫ್ ಹಾಗೂ ಎಸ್ಒಜಿ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಕಾರ್ಯಾಚಱಣೆ ವೇಳೆ ಕೆಲ ಸ್ಥಳೀಯರು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಕಲ್ಲು ತೂರಾಟದ ನಡುವೆಯೂ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಅಶ್ರುವಾಯು ಪ್ರಯೋಗದ ಬಳಿಕ ಕೆಲ ಸಮಯವಾದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಥಳೀಯರೊಂದಿಗಿನ ಘರ್ಷಣೆ ನಡುವೆಯೇ ಸ್ಥಳದಲ್ಲಿ ಕತ್ತಲು ಆವರಿಸಿದ್ದರಿಂದಾಗಿ ಕಾರ್ಯಾಚರಣೆಗೆ ಅಡ್ಡಿ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಸೇನ ಪಡೆ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿತ್ತು. ಇದೀಗ ಶೋಪಿಯಾನ್ ಜಿಲ್ಲೆಯ ಪೆಹ್ಲಿಪೊರಾ, ನವಾ ಕದಲ್ ಮತ್ತು ಜಲ್ದಗಾರ್ ಸೇರಿದಂತೆ ಶ್ರೀನಗರದ ಹಲವೆಡೆ ಭಾರೀ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆ ವೇಳೆ ಓರ್ವ ಶಂಕಿತನನ್ನು ಬಂಧನಕ್ಕೊಳಪಡಿಸಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos