ನವದೆಹಲಿ: ಉತ್ತರಪ್ರದೇಶ ಬಳಿಕ ಮಧ್ಯಪ್ರದೇಶದ ಮದರಸಾಗಳಿಗು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಸುತ್ತೋಲೆ ಜಾರಿಗೊಳಿಸಿರುವುದಕ್ಕೆ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್, ರಾಷ್ಟ್ರಪ್ರೇಮ ಎಂಬುದು ನಮ್ಮ ರಕ್ತದಲ್ಲಿಯೇ ಇದ್ದು, ದೇಶಭಕ್ತಿ ಕುರಿತ ಪ್ರೇರೇಪಿಸುವುದು, ಬಲವಂತದಿಂದ ಹೇರುವ ಪ್ರಯತ್ನಗಳನ್ನು ಬಿಜೆಪಿ ಮಾಡಬಾರದು ಎಂದು ಭಾನುವಾರ ಹೇಳಿದೆ.
ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತಾಗಿ ಉತ್ತರಪ್ರದೇಶದ ಬಳಿಕ ಮಧ್ಯಪ್ರದೇಶ ಸರ್ಕಾರ ಕೂಡ ನಿನ್ನೆಯಷ್ಟೇ ಸುತ್ತೋಲೆಯನ್ನು ಜಾರಿಗೊಳಿಸಿತ್ತು.
ಮಧ್ಯಪ್ರದೇಶದಲ್ಲಿರುವ 4,750 ನೋಂದಾಯಿತ ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ತ್ರಿವರ್ಣ ಧ್ವಜ ಆರೋಹಣ, ಸಾಂಸ್ಕತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಕಡ್ಡಾಯವಾಗಿ ತ್ರಿವರ್ಣ ಧ್ವಜ ರ್ಯಾಲಿಗಳನ್ನು ನಡೆಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಈ ಕಾರ್ಯಕ್ರಮಗಳ ಫೋಟೋಗಳನ್ನು ತೆಗೆದು, ಸುತ್ತೋಲೆಯಲ್ಲಿ ತಿಳಿಸಲಾದ ಇ-ಮೇಲ್ ಗಳಿಗೆ ರವಾನಿಸುವಂತೆ ನಿರ್ದೇಶಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಅವರು, ರಾಷ್ಟ್ರಧ್ವಜ ಹಾರಿಸುವಂತೆ ಹಾಗೂ ರಾಷ್ಟ್ರಗೀತೆಯನ್ನು ಹಾಡುವಂತೆ ಒತ್ತಾಯ ಮಾಡುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಇಂದು ಈ ಬೆಳವಣಿಗೆಗಳು ನಮ್ಮ ದೇಶದಲ್ಲಿ ನಡೆಯುತ್ತಿದೆ. ಬಿಜೆಪಿ ಪಕ್ಷ ಶಪಥ ಮಾಡಿದ ಬಳಿಕವೇ ದೇಶಭಕ್ತಿ ಹುಟ್ಟಿದೆ ಎಂಬಂತಹ ವಾತಾವರಣ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾದಂತಿದೆ. ರಾಷ್ಟ್ರಪ್ರೇಮ ಎಂಬುದು ನಮ್ಮ ರಕ್ತದಲ್ಲಿಯೇ ಇದೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ದೇಶವನ್ನು ಒಡೆಯುವ ಹಾಗೂ ಒಡಕುಂಟು ಮಾಡುವ ಬೆಳವಣಿಗೆಗಳಾಗಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos