ಇಶ್ರತ್ ಜಹಾನ್ (ಸಂಗ್ರಹ ಚಿತ್ರ)
ನವದೆಹಲಿ: ಗುಜರಾತ್ ನಲ್ಲಿ ಇಶ್ರತ್ ಜಹಾನ್ ಮತ್ತು ಸೊಹ್ರಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳಾದ ಎನ್.ಕೆ.ಅಮೀನ್ ಮತ್ತು ಟಿ.ಎ.ಬರೊಟ್ ಅವರನ್ನು ಇಂದು ಸುಪ್ರೀಂ ಕೋರ್ಟ್ ತಕ್ಷಣವೇ ರಾಜಿನಾಮೆ ನೀಡುವಂತೆ ಆಗ್ರಹಿಸಿದೆ.
ಅಮಿನ್ ಕಳೆದ ವರ್ಷ ಆಗಸ್ಟ್ ನಲ್ಲಿ ಸೂಪರಿಂಟೆಂಡೆಂಟ್ ಪೊಲೀಸ್ ಹುದ್ದೆಯಿಂದ ನಿವೃತ್ತರಾಗಿದ್ದರು. ನಂತರ ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಮೇರೆಗೆ ಮರು ನೇಮಕಗೊಂಡಿದ್ದರು. ಇವರು ಸೊಹ್ರಬುದ್ದೀನ್ ಮತ್ತು ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಬರೊಟ್ ಕಳೆದ ವರ್ಷ ವಡೋದರದಲ್ಲಿ ನಿವೃತ್ತಿ ನಂತರ ಗುತ್ತಿಗೆ ಮೇರೆಗೆ ಪಶ್ಚಿಮ ರೈಲ್ವೆಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಮರು ನೇಮಕಗೊಂಡಿದ್ದರು. ಇವರು ಇಶ್ರತ್ ಜಹಾನ್ ಮತ್ತು ಸಾದಿಕ್ ಜಮಲ್ ಎನ್ ಕೌಂಟರ್ ಪ್ರಕರಣದ ಆರೋಪಿಯಾಗಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಇಬ್ಬರು ಪೊಲೀಸ್ ಅಧಿಕಾರಿಗಳ ಪರ ವಕೀಲರ ಅರ್ಜಿ ವಿಚಾರಣೆ ನಡೆಸಿ ಈ ಕೂಡಲೇ ರಾಜಿನಾಮೆ ನೀಡುವಂತೆ ಹೇಳಿ, ಮಾಜಿ ಐಪಿಎಸ್ ಅಧಿಕಾರಿ ರಾಹುಲ್ ಶರ್ಮ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು.
ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇವೆಗೆ ಮರು ನೇಮಕ ಮಾಡದಂತೆ ಗುಜರಾತ್ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಈ ಇಬ್ಬರು ಪೊಲೀಸ್ ಅಧಿಕಾರಿಗಳು ಗಂಭೀರ ಆರೋಪ ಎದುರಿಸುತ್ತಿದ್ದು, ಈಗಾಗಲೇ 8 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಸೇವೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos