ದೇಶ

ಬಾಂಬ್ ಸ್ಪೋಟ ಪ್ರಕರಣಗಳ ಆರೋಪಿಗಳನ್ನು ಬಿಜೆಪಿ ಕಾಪಾಡುತ್ತಿದೆ: ದಿಗ್ವಿಜಯ್ ಸಿಂಗ್

Manjula VN
ನವದೆಹಲಿ: ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್)ಕ್ಕೆ ಸೇರಿದ ಆರೋಪಿಗಳನ್ನು ಬಿಜೆಪಿ ರಕ್ಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. 
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆ.ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಕರ್ನಲ್ ಪುರೋಹಿತ್ ಗೆ ಜಾಮೀನು ದೊರಕಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ಆರ್'ಎಸ್ಎಸ್ ಸಂಘಟನೆ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವಾಗ ಸುಪ್ರೀಂಕೋರ್ಟ್ ನ ಈ ಆದೇಶ ನಿರೀಕ್ಷಿತವಾದದ್ದೇ ಎಂದು ಹೇಳಿದ್ದಾರೆ. 
ಸೆಪ್ಟೆಂಬರ್ 29, 2008 ರಂದು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 7 ಮಂದಿ ಸಾವನ್ನಪ್ಪಿದರು. ಪ್ರಕರಣ ಸಂಬಂಧ ವಿಶೇಷ ಎಂಸಿಓಸಿಎ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯವು ಭಯೋತ್ಪಾದನಾ-ವಿರೋಧಿ ದಳವು ಪ್ರಜ್ಞಾಸಿಂಗ್ ಠಾಕೂರ್, ಪುರೋಹಿತ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
2008 ರ ಮಾಲೆಗಾಂವ್ ಸ್ಫೋಟ ಪ್ರಕರಣ ಸಂಬಂಧ ಮಧ್ಯಂತರ ಜಾಮೀನು ಕೋರಿ ಪುರೋಹಿತ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ವಿಚಾರಣೆ ನಡೆಸಿತ್ತು. ಇದರಂತೆ ತೀರ್ಪನ್ನು ಇಂದಿಗೆ ಮುಂದೂಡಿತ್ತು. ಇದೀಗ ಶ್ರೀಕಾಂತ್ ಪುರೋಹಿತ್ ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
SCROLL FOR NEXT