ದೇಶ

2008 ಮಾಲೇಗಾಂವ್ ಸ್ಫೋಟ ಪ್ರಕರಣ: 9 ವರ್ಷಗಳ ಬಳಿಕ ಲೆ.ಕ. ಪುರೋಹಿತ್ ಜೈಲಿನಿಂದ ಬಿಡುಗಡೆ

Manjula VN
ಮುಂಬೈ: 2008 ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆ.ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರಿಗೆ ಸುಪ್ರೀಂಕೋರ್ಟ್ ನಿಂದ ಜಾಮೀನು ನೀಡಿದ ಹಿನ್ನಲೆಯಲ್ಲಿ ಜೈಲಿನಿಂದ ಬುಧವಾರ ಬಿಡುಗಡೆಯಾಗಿದ್ದಾರೆ. 
ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದರೂ, ಪುರೋಹಿತ್ ಅವರು ಜೈಲಿನಿಂದ ಬಿಡುಗೆಯಾಗುವ ಭಾಗ್ಯ ಪಡೆದಿರಲಿಲ್ಲ. ಆದರೆ, ಜಾಮೀನಿನ ನಿಯಾವಳಿಗಳು ನಿನ್ನೆ ಮುಕ್ತಾಯವಾಗದಿರುವುದರಿಂದಾಗಿ ಕರ್ನಲ್ ಅವರ ಬಿಡುಗಡೆ ವಿಳಂಬವಾಗಿತ್ತು. ಇದೀಗ ಎಲ್ಲಾ ನಿಯಾಮಾವಳಿಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. 
ಪುರೋಹಿತ್ ಅವರಿಗೆ ಜಾಮೀನು ಮಂಜೂರು ಮಾಡಲು ಸುಪ್ರೀಂಕೋರ್ಟ್ ಕೆಲ ಶೂರಿಟಿಗಳನ್ನು ಕೇಳಿತ್ತು. ಆದರೆ, ಇದೀಗ ಪುರೋಹಿತ್ ಮನವಿ ಮೇರೆಗೆ ತನ್ನ ಆದೇಶವನ್ನು ಮಾರ್ಪಡಿಸಿರುವ ಸುಪ್ರೀಂ, ಶೂರಿಟಿ ಬಲಿಗೆ ನಗದು ಠೇವಣಿ ಮೇರೆಗೆ ಜಾಮೀನು ಮಂಜೂರು ಮಾಡಿದೆ. 
ಶೂರಿಟಿ ಬದಲಿಗೆ ನಗದು ಮೂಲಕ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಸುಪ್ರೀಂಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿ, ಜಾಮೀನು ಮಂಜೂರು ಮಾಡಿದೆ ಎಂದು ಪುರೋಹಿತ್ ಅವರ ಪರ ವಕೀಲರು ಹೇಳಿದ್ದಾರೆ. 
ಪುರೋಹಿತ್ ಅವರಿಗೆ ಜಾಮೀನು ನೀಡಲು ಈ ಹಿಂದೆ ಬಾಂಬ್ ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಪ್ರಕರಣದ ತನಿಖೆ ನಡೆಸುತ್ತಿದ್ದು, ಪುರೋಹಿತ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿತ್ತು. ಸ್ಫೋಟ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳಿವೆ ಎಂದು ಎನ್ಐಎ ವಾದಿಸಿತ್ತು. 
ಪುರೋಹಿತ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ವಾದ ಮಂಡಿಸಿದ್ದರು. ಕಳೆದ 9 ವರ್ಷಗಳಿಂದ ಪುರೋಹಿತ್ ಅವರು ಜೈಲಿನಲ್ಲಿದ್ದರೂ ಅವರ ವಿರುದ್ಧ ಆರೋಪ ನಿಗದಿಯಾಗಿಲ್ಲ. ಅವರ ವಿರುದ್ಧದ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿಯಲ್ಲಿನ ಆರೋಪಗಳನ್ನು ಕೈಬಿಡಲಾಗಿದೆ ಹಾಗಾಗಿ ಅವರಿಗೆ ಜಾಮೀನು ನೀಡಬೇಕೆಂದು ಕೋರಿದ್ದರು. 
ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ 10 ಮಂದಿಯ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕರಣ ದಾಖಲಿಸಿಕೊಂಡಿತ್ತು. 2011ರಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. 
SCROLL FOR NEXT