ಗುರ್ಮೀತ್ ರಾಮ್ ರಹೀಮ್ ಸಿಂಗ್
ಚಂಡೀಗಡ: ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪು ಶುಕ್ರವಾರ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್ ನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಚಂಡೀಗಡ ಪೊಲೀಸ್ ಮಹಾ ನಿರ್ದೇಶಕ ತೇಜಿಂದರ್ ಲೂತ್ರಾ ಸೆಕ್ಷನ್ 144 ಹೇರಿರುವುದಾಗಿ ತಿಳಿಸಿದ್ದಾರೆ. ನಾಳೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಈಗಾಗಲೇ ಜಮಾಯಿಸಿದ್ದಾರೆ. ಪಂಚಕುಲದ ಸೆಕ್ಟರ್ 23 ರಲ್ಲಿ ಸುಮಾರು 10 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಡೇರಾ ಸಚಾ ಸೌದಾ ಮುಖ್ಯಸ್ಥ ಗುರುಮಿತ್ ರಾಮ್ ರಹೀಮ್ ಸಿಂಗ್ 14 ವರ್ಷಗಳಷ್ಟು ಹಿಂದಿನ ರೇಪ್ ಕೇಸ್ನಲ್ಲಿ ಆರೋಪಿ ಆಗಿದ್ದಾರೆ.ಈ ಸಂಬಂಧದ ತೀರ್ಪು ನಾಳೆ ಹೊರಬೀಳಲಿದೆ. ಹರ್ಯಾಣದ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ನಾಳೆ ತೀರ್ಪು ನೀಡಲಿದೆ.
ಪಂಜಾಬ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಾಂತ144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಿದೆ. ಅಲ್ಲದೇ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಸ್ತಾಸ್ತ್ರಗಳ ಸಾಗಾಣೆಯನ್ನು ನಿಷೇಧಿಸಲಾಗಿದೆ.
ಕೇಂದ್ರ ಸರ್ಕಾರ ಕೂಡಾ ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅರೆಸೇನಾಪಡೆಗಳನ್ನು ನಿಯೋಜಿಸಿದೆ. ರೇಪ್ ಕೇಸ್ ತೀರ್ಪು ಬಂದ ನಂತರ ಉದ್ಭವಿಸಬಹುದಾದ ಸಮಸ್ಯೆ ಹಿನ್ನೆಲೆಯಲ್ಲಿ ಕರ್ಫ್ಯೂ ವಿಧಿಸುವ ಸಾಧ್ಯತೆಯಿದೆ.
ತೀರ್ಪಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಗುರುಮಿತ್ ರಾಮ್ ರಹೀಮ್ ಟ್ವೀಟ್ ಮೂಲಕ ತಮ್ಮ ಅನುಯಾಯಿಗಳಿಗೆ ಸಂದೇಶ ರವಾನಿಸಿದ್ದಾರೆ. ''ನಿಸ್ವಾರ್ಥ ಸೇವೆ, ಧ್ಯಾನ ಮತ್ತು ದೃಢ ನಂಬಿಕೆ ಆಧ್ಯಾತ್ಮಿಕತೆಯ ಆಭರಣಗಳು " ಅಂತಾ ಟ್ವೀಟ್ ಮಾಡಿ ಫೇಸ್ಬುಕ್ ವಿಡಿಯೋ ಲಿಂಕ್ ನೀಡಿದ್ದಾರೆ.
ಗುರುಮಿತ್ ರಾಮ್ ರಹೀಮ್ ಸಿಂಗ್ ಇಬ್ಬರು ಸಾಧ್ವಿಗಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದರೆಂದು 2002ರಲ್ಲಿ ಸಿಬಿಐ ಕೇಸ್ ದಾಖಲಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos