ಮುಂಬೈ: ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ನಡುವೆ ಸಂಚರಿಸುವ ಮುಂಬೈ ಲೋಕಲ್ (ಸ್ಥಳೀಯ) ರೈಲಿನ 4 ಬೋಗಿಗಳು ಹಳಿ ತಪ್ಪಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಇಂದು ಬೆಳಿಗ್ಗೆ 9.55ರ ಸುಮಾರಿಗೆ ಮಹಿಮ್-ದಕ್ಷಿಣ ಭಾಗದತ್ತ ಆಗಮಿಸುತ್ತಿದ್ದ ವೇಳೆ ರೈಲಿನ 4 ಬೋಗಿಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದಲ್ಲಿ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, ರೈಲ್ವೆ ಕಾರ್ಮಿಕರು ಹಳಿಗಳನ್ನು ದುರಸ್ತಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲೊಂದು ಹಳಿ ತಪ್ಪು 24 ಮಂದಿ ಸಾವನ್ನಪ್ಪಿ, 156 ಮಂದಿ ಗಾಯಗೊಂಡಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿತ್ತು. ಕೈಫಿಯತ್ ಎಕ್ಸೆಪ್ರೆಸ್ ರೈಲು ಹಳಿ ತಪ್ಪಿ 74 ಮಂದಿ ಗಾಯಗೊಂಡಿದ್ದರು.
ಸರಣಿ ರೈಲು ಅಪಘಾತ ದುರಂತಗಳಿಂದ ತೀವ್ರವಾಗಿ ಮನನೊಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲು ಮುಂದಾಗಿದ್ದರು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇನ್ನೂ ಸ್ವಲ್ಪ ದಿನ ಕಾಯುವಂತೆ ಸೂಚನೆ ನೀಡಿದ್ದರು ಎಂದು ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos