ದೇಶ

ಗೋರಖ್'ಪುರ ಆಸ್ಪತ್ರೆ ದುರಂತ: ಅಮಾನತುಗೊಂಡಿದ್ದ ಬಿಆರ್'ಡಿ ಕಾಲೇಜು ಪ್ರಾಂಶುಪಾಲ, ಪತ್ನಿ ಬಂಧನ

Manjula VN
ಲಖನೌ: ಉತ್ತರಪ್ರದೇಶದ ಗೋರಖ್'ಪುರ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಬಿಆರ್'ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಹಾಗೂ ಪತ್ನಿಯನ್ನು ಉತ್ತರಪ್ರದೇಶ ವಿಶೇಷ ಕಾರ್ಯಾಚರಣಾ ಪಡೆ ಮಂಗಳವಾರ ಬಂಧನಕ್ಕೊಳವಡಿಸಿದೆ. 
ಅಮಾನತುಗೊಂಡಿದ್ದ ಬಾಬಾ ರಾಘವಾ ದಾಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ರಾಜೀವ್ ಕುಮಾರ್ ಮುಶ್ರಾ ಹಾಗೂ ಪತ್ನಿ ಡಾ.ಪೂರ್ಣಿಮಾ ಶುಕ್ಲಾರನ್ನು ಕಾನ್ಪುರದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆಂದು ತಿಳಿದುಬಂದಿದೆ. 
ಖಚಿತ ಮಾಹಿತಿ ಆಧಾರದ ಮೇರೆಗೆ ಕಾನ್ಪುರದಲ್ಲಿರುವ ಹೆಸರಾಂತ ಕ್ರಿಮಿನಲ್ ವಕೀಲರೊಬ್ಬ ಮನೆಯ ಮೇಲೆ ದಾಳಿ ನಡೆಸಿದ್ದ ಎಸ್'ಟಿಎಫ್ ಅಧಿಕಾರಿಗಳು ದಂಪತಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. 
ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ ನಿರಂತರ ಮಕ್ಕಳು ಸಾವಿಗೀಡಾದ ಹಿನ್ನಲೆಯಲ್ಲಿ ದೇಶದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ರಾಜೀವ್ ಮಿಶ್ರಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಅವರನ್ನು ವಜಾಗೊಳಿಸಿದ್ದಾಗಿ ಉತ್ತರಪ್ರದೇಶ ಸರ್ಕಾರ ಹೇಳಿತ್ತು. 
ಕಳೆದ 24 ರಂದು ಮಿಶ್ರಾ, ಆಮ್ಲಜನಕ ಸರಬರಾಜು ಕಂಪನಿ ಮತ್ತು ಆಸ್ಪತ್ರೆಯ ವೈದ್ಯರ ಮೇಲೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಇದೀಗ ಮಿಶ್ರಾ ಹಾಗೂ ಅವರ ಪತ್ನಿಯನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. 
SCROLL FOR NEXT