ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ದರ ಶೇ.3 ರಷ್ಟು ಕುಸಿದಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಳವಣಿಗೆ ದರ ಶೇ.3 ರಷ್ಟು ಕುಸಿತ ಕಂಡಿರುವುದರಿಂದ ಸುಮಾರು 4 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆ ಕುಸಿತ ಕಂಡಿರುವುದು ದುರಂತ, ಶೇ.3 ರಷ್ಟು ಕುಸಿತ ಕಂಡಿದೆ ಎಂದರೆ ಅದರ ಪರಿಣಾಮ ದೇಶಕ್ಕೆ ಸುಮಾರು 4 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ದೇಶಕ್ಕೆ ಉಂಟಾಗಿರುವ ನಷ್ಟದ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕಾಗಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ನೋಟು ನಿಷೇಧವೊಂದು ದೊಡ್ದ ಹಗರಣವಾಗಿದ್ದು, ಇದರಿಂದ ಶ್ರೀಮಂತರು ತಮ್ಮ ಕಪ್ಪು ಹಣವನ್ನು ಸಕ್ರಮ ಮಾಡಿಕೊಂಡಿದ್ದಾರೆ. ಶೇ.99.68 ರಷ್ಟು ಕಪ್ಪು ಹಣ ಸಕ್ರಮವಾಗಿದೆ. ದೇಶದ ಬಹುತೇಜ ಜನತೆ 10,000 ರೂಪಾಯಿ ದುಡಿಯುತ್ತಿದ್ದಾರೆ. ಕೇಂದ್ರ ಸರ್ಕಾರ ನೋಟು ನಿಷೇಧದಿಂದ ಬಡವರ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಕಪಿಲ್ ಸಿಬಲ್ ಅಸಮಾಧಾನಗೊಂಡಿದ್ದಾರೆ.