ಸೂರತ್: ಭಾರತೀಯ ಜನತಾ ಪಕ್ಷ ದೇಶದ ಜನರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಜನಮಾನಸದಿಂದ ಅಳಿಸಿ ಹೋಗುತ್ತಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸೂರತ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಜೇಟ್ಲಿ ಗುಜರಾತ್ ಚುನಾವಣೆ ಬಿಜೆಪಿಗೆ ಮುಖ್ಯವಾದದ್ದಾಗಿದ್ದು, ಗುಜರಾತ್ ಜನತೆ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮತ ಹಾಕುತ್ತಾ ಬಂದಿದ್ದಾರೆ. ಈ ಬಾರಿಯೂ ಅಭಿವೃದ್ಧಿಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಈ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಕುಟುಕಿದ ಜೇಟ್ಲಿ, ಈ ಹಿಂದಿನ 10 ವರ್ಷಗಳ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರವಾಗಿತ್ತು, ಪ್ರಮುಖ ನಾಯಕನಿಲ್ಲದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಿ ಕೇವಲ ಕಚೇರಿಗೆ ಮಾತ್ರ ಸೀಮಿತವಾಗಿದ್ದರು. ಅವರಿಗೆ ಯಾವುದೇ ರೀತಿಯ ಅಧಿಕಾರ ಇರಲ್ಲಿಲ್ಲ. ವಿದೇಶಿ ಬಂಡವಾಳ ಸಂಪೂರ್ಣ ಸ್ಥಗಿತವಾಗಿತ್ತು. ಅಭಿವೃದ್ಧಿ ಕಾರ್ಯ ಸ್ಥಗಿತವಾಗಿತ್ತು. ಆ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರಂತರವಾಗಿ ಅಭಿವೃದ್ಧಿಯತ್ತ ಸಾಗಿದೆ. ಇಂದು ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 42ನೇ ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕಾರಣ, ಬಿಜೆಪಿ ದೇಶದ ಜನರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಜನಮಾನಸದಿಂದ ಅಳಿಸಿ ಹೋಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿಪಕ್ಷಗಳ ಬಿಜೆಪಿಯಿಂದ ಮತಯಂತ್ರ ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಜೇಟ್ಲಿ, ಇನ್ನು ಮತದಾನವಾಗಿ ಫಲಿತಾಂಶವೇ ಪ್ರಕಟವಾಗಿಲ್ಲ. ಆಗಲೇ ವಿಪಕ್ಷಗಳಿಗೆ ಸೋಲಿನ ಭೀತಿ ಕಾಡುತ್ತಿದೆ. ಇದೇ ಅವರ ಆರೋಪಗಳಿಗೆ ಕಾರಣ ಎಂದು ಹೇಳಿದರು. ಅಂತೆಯೇ ಬಿಜೆಪಿ ಎಂದಿಗೂ ಹಿಂದೂಪರ ಅಂಜೆಡಾ ಹೊಂದಿದೆ ಎಂದೂ ಜೇಟ್ಲಿ ಸ್ಪಷ್ಟ ಪಡಿಸಿದರು. ಪದ್ಮಾವತಿ ಚಿತ್ರ ವಿವಾದ ಸಂಬಂಧ ಮಾತನಾಡಿದ ಜೇಟ್ಲಿ ಇದು ಸೆನ್ಸಾರ್ ಮಂಡಳಿಗೆ ಸಂಬಂಧಿಸಿದ ವಿಚಾರವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.