ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹಿನ್ನೆಲೆ ಮತ್ತೊಮ್ಮೆ ಚರ್ಚಾ ವಿಷಯವಾಗಿದ್ದು, ನನ್ನ ಹಿನ್ನೆಲೆಯ ವಿಷಯದಲ್ಲಿ ದೇಶದ ಅನುಕಂಪವನ್ನು ನಿರೀಕ್ಷಿಸುವುದಿಲ್ಲ, ಈ ವಿಷಯವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಪರ್ಧಿಸಲು ಇಷ್ಟಪಡುವುದಿಲ್ಲ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಂತೆ ತಾವು ತಮ್ಮ ಹಿನ್ನೆಲೆಯ ಬಗ್ಗೆ ಹೇಳಿಕೊಳ್ಳದೇ ಇರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಮನಮೋಹನ್ ಸಿಂಗ್, ನನ್ನ ಹಿನ್ನೆಲೆಯ ವಿಷಯದಲ್ಲಿ ದೇಶದ ಅನುಕಂಪವನ್ನು ನಿರೀಕ್ಷಿಸುವುದಿಲ್ಲ, ನಾನು ಹಿನ್ನೆಲೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಪರ್ಧಿಸಲು ಇಚ್ಛಿಸುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ನೋಟು ನಿಷೇಧ, ಜಿಎಸ್ ಟಿ ವಿಷಯವಾಗಿಯೂ ಡಾ. ಸಿಂಗ್ ಮಾತನಾಡಿದ್ದು, ನೋಟು ನಿಷೇಧ, ಜಿಎಸ್ ಟಿಯನ್ನು ಸರಿಯಾಗಿ ಜಾರಿಗೊಳಿಸದೇ ಇರುವುದು, ಭ್ರಷ್ಟಾಚಾರ ತಡೆಗಟ್ಟುವ ಸೋಗಿನಲ್ಲಿ ಎದುರಾಗಿರುವ ತೆರಿಗೆ ಭಯೋತ್ಪಾದನೆ ಖಂಡಿತವಾಗಿಯೂ ಮಧ್ಯಮ-ಸಣ್ಣ ಉದ್ಯಮಗಳಿಗೆ ಸಮಸ್ಯೆಯಾಗಿದೆ, ಇನ್ನು ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾದಂತಹ ಘೋಷಣೆಗಳಿದ್ದು, ಅವುಗಳಿಕ್ಗೆ ಪರಿಣಾಮಕಾರಿ ನೀತಿಗಳಿಲ್ಲದಂತಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.