ದೇಶ

ಶರದ್ ಯಾದವ್, ಅಲಿ ಅನ್ವರ್ ರಾಜ್ಯಸಭಾ ಸದಸ್ಯತ್ವ ಅನರ್ಹ

Srinivas Rao BV
ನವದೆಹಲಿ: ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಹಾಗೂ ಅಲಿ ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಅನರ್ಹಗೊಳಿಸಿದ್ದಾರೆ. 
ಈ ಕುರಿತು ಜೆಡಿಯು ನಾಯಕ ಆರ್ ಸಿಪಿ ಸಿಂಗ್ ಮಾಹಿತಿ ನೀಡಿದ್ದು, ನಾವು ಅಲಿ ಅನ್ವರ್ ಅನ್ಸಾರಿ ಹಾಗು ಶರದ್ ಯಾದವ್ ಅವರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿರುವ ರಾಜ್ಯಸಭಾಧ್ಯಕ್ಷರು, ಶರದ್ ಯಾದವ್ ಹಾಗೂ ಅಲಿ ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. 
ವೆಂಕಯ್ಯ ನಾಯ್ಡು ಅವರು ಪ್ರಕಟಿಸಿರುವ ಆದೇಶದ ಪ್ರತಿಯನ್ನೂ ಸಹ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಆರ್ ಸಿಪಿ ಸಿಂಗ್, ಪಕ್ಷದ ರಾಷ್ಟ್ರಾಧ್ಯಕ್ಷ ನಿತೀಶ್ ಕುಮಾರ್ ಅವರೊಂದಿಗೆ ಒಗ್ಗಟ್ಟಿನಿಂದ ಇದ್ದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆ ತಿಳಿಸಿದ್ದಾರೆ. 
ಜೆಡಿಯು ಬಂಡಾಯ ನಾಯಕರಾಗಿದ್ದ ಶರದ್ ಯಾದವ್ ಹಾಗೂ ಅನ್ಸಾರಿ ಅವರ ರಾಜ್ಯಸಭಾ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಬಿಹಾರ ಜೆಡಿಯು ರಾಷ್ಟ್ರಾಧ್ಯಕ್ಷ ನಿತೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಬಿಹಾರದಲ್ಲಿ ಆರ್ ಜೆಡಿ, ಕಾಂಗ್ರೆಸ್ ನೊಂದಿಗಿನ ಮಹಾ ಮೈತ್ರಿಯನ್ನು ನಿತೀಶ್ ಕುಮಾರ್ ತೊರೆದಿದ್ದನ್ನು ಜೆಡಿಯು ನಾಯಕ ಶರದ್ ಯಾದವ್ ವಿರೋಧಿಸಿದ್ದರು.
SCROLL FOR NEXT