ನವದೆಹಲಿ: ಯಮುನಾ ನದಿ ತೀರದ ಪರಿಸರ ಹಾನಿಯಾಗಲು ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಕಾರಣ ಎಂದು ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ(ಎನ್ಜಿಟಿ) ಹೇಳಿದೆ.
ಕಳೆದ ವರ್ಷ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ನದಿ ತೀರದಲ್ಲಿ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಆ ಪ್ರದೇಶದ ಪರಿಸರಕ್ಕೆ ಗಂಭೀರ ಹಾನಿಯಾಗಿದ್ದು, ಆರ್ಟ್ ಆಫ್ ಲಿವಿಂಗ್ ದಂಡದ ಹಣ ಠೇವಣಿ ಮಾಡಿದ ನಂತರ ಪುನರುಜ್ಜೀವನ ಕಾರ್ಯ ಕೈಗೊಳ್ಳುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ಗೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವ ಹಸಿರು ಪೀಠ ಆದೇಶಿಸಿದೆ.
ಕಳೆದ ವರ್ಷ ಎನ್ ಜಿಟಿ ಮಧ್ಯಂತರ ಪರಿಸರ ಹಾನಿಗೆ ಪರಿಹಾರವಾಗಿ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರುಪಾಯಿ ದಂಡ ವಿಧಿಸಿತ್ತು. ಈಗ ಯಾವುದೇ ಹೆಚ್ಚುವರಿ ದಂಡ ವಿಧಿಸಿಲ್ಲ. ಆದರೆ ಪರಿಸರ ಪುನರುಜ್ಜೀವನಕ್ಕೆ ಹೆಚ್ಚು ವೆಚ್ಚವಾದರೆ ಅದನ್ನು ಆರ್ಟ್ ಆಫ್ ಲಿವಿಂಗ್ ನಿಂದ ವಸೂಲಿ ಮಾಡುವಂತೆ ಡಿಡಿಎಗೆ ಸೂಚಿಸಿದೆ.
ಯಮುನಾ ನದಿ ತೀರದ ಪರಿಸರ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ಹಸಿರು ನ್ಯಾಯ ಮಂಡಳಿಗೆ ವರದಿ ನೀಡಿದ್ದು, ಯಮುನಾ ನದಿ ತೀರದ ಪರಿಸರಕ್ಕಾದ ಹಾನಿ ಸರಿಪಡಿಸಲು 13.29 ಕೋಟಿ ರುಪಾಯಿ ಖರ್ಚಾಗಲಿದೆ ಮತ್ತು ಅದಕ್ಕೆ 10 ವರ್ಷ ಸಮಯ ಬೇಕು ಎಂದು ವರದಿಯಲ್ಲಿ ತಿಳಿಸಿದ್ದರು.
ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದಾಗಿ ಯಮುನಾ ನದಿಯ ಪಶ್ಚಿಮದ 120 ಹೆಕ್ಟೇರ್ ತೀರ ಪ್ರದೇಶ ಮತ್ತು ಪೂರ್ವದ 50 ಹೆಕ್ಟೇರ್ ತೀರ ಪ್ರದೇಶಕ್ಕೆ ಗಂಭೀರ ಹಾನಿಯಾಗಿದೆ ಎಂದು ಸಮಿತಿ ವರದಿ ನೀಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos