ನವದೆಹಲಿ: ಆಧಾರ್ ಕಾರ್ಡ್-ಪ್ಯಾನ್ ಕಾರ್ಡ್ ಜೋಡಣೆ ಸೇರಿದಂತೆ ಕೇಂದ್ರ ಸರ್ಕಾರ ನೀಡುವ ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಮಾಡುವ ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಜೋಡಣೆ ಕುರಿತು ತನ್ನ ನಿರ್ಧಾರವನ್ನು ಪುನರುಚ್ಛರಿಸಿದ್ದು, ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ. ಮೊಬೈಲ್ ಸಿಮ್ ಗೆ ಆಧಾರ್ ಜೋಡಣೆ ಮಾಡುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯ ಮಾಡಿರುವುದರಿಂದ ಅದರ ಗಡುವನ್ನು ವಿಸ್ತರಿಸಲಾಗುವುದಿಲ್ಲ. ಸಿಮ್ಗೆ ಆಧಾರ್ ಜೋಡಣೆ ಮಾಡಲು ಮುಂದಿನ ಫೆಬ್ರುವರಿ 6 ಕೊನೆಯ ದಿನವಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದರು.
ಬ್ಯಾಂಕ್ ಖಾತೆ ಮತ್ತು ಪ್ಯಾನ್ ಸಂಖ್ಯೆಗೆ ಆಧಾರ್ ಜೋಡಣೆಗೂ ಇದು ಅನ್ವಯವಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.
ವಿವಿಧ ಸೇವೆಗಳಿಗೆ ಆಧಾರ್ ನೋಂದಣಿ ಮಾಡದವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ಕೊಡಬೇಕು ಎಂದು ಆಧಾರ್ ಯೋಜನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರ ಪರ ವಾದಿಸುತ್ತಿರುವ ವಕೀಲ ಶ್ಯಾಮ್ ದಿವಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್, ಆಧಾರ್ ನೋಂದಣಿ ಮಾಡಲು ಬಯಸುವವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇವರಿಗೆ ಮುಂದಿನ ಮಾರ್ಚ್ 31ರವರೆಗೆ ಯಾವುದೇ ಸೇವೆಯನ್ನು ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.