ದೇಶ

ವನಬಂಧು ಯೋಜನೆಗೆ ಮೀಸಲಿಟ್ಟ ಹಣ ಎಲ್ಲಿ ಹೋಯಿತು ಪ್ರಧಾನಿಗಳೇ?: ರಾಹುಲ್ ಗಾಂಧಿಯ 10ನೇ ಪ್ರಶ್ನೆ

Sumana Upadhyaya
ನವದೆಹಲಿ: ಗುಜರಾತ್ ರಾಜ್ಯದಲ್ಲಿ ಆದಿವಾಸಿಗಳ ಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ವನಬಂಧು ಯೋಜನೆಗೆಂದು ಮೀಸಲಿಟ್ಟಿದ್ದ 55 ಸಾವಿರ ಕೋಟಿ ರೂಪಾಯಿ ಎಲ್ಲಿಗೆ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಣತಂತ್ರವಾಗಿ ಕಳೆದ ಹತ್ತು ದಿನಗಳಿಂದ ದಿನಕ್ಕೊಂದು ಪ್ರಶ್ನೆಯನ್ನು ಮೋದಿಯವರಿಗೆ ಕೇಳುತ್ತಾ ಬಂದಿದ್ದ ರಾಹುಲ್ ಗಾಂಧಿ ಇಂದು ಈ ಪ್ರಶ್ನೆ ಕೇಳಿದ್ದಾರೆ.
ಆದಿವಾಸಿಗಳ ಜಮೀನನ್ನು ಕಸಿದುಕೊಂಡು ಅರಣ್ಯದಲ್ಲಿ ಜೀವಿಸುವ ಅವರ ಹಕ್ಕನ್ನು ನಿರಾಕರಿಸಲಾಗಿದೆ. ಭೂಮಿಯ ಒಡೆತನಕ್ಕೆ ಇರುವ ಲಕ್ಷಾಂತರ ಕಾನೂನು ದಾಖಲೆಪತ್ರಗಳು ಜಾರಿಯಾಗದೆ ಹಾಗೆ ಉಳಿದುಕೊಂಡಿವೆ ಎಂದು ಟ್ವೀಟ್ ಮಾಡಿದ್ದಾರೆ.
ಆದಿವಾಸಿಗಳ ಮಕ್ಕಳಿಗಾಗಿ ಇರುವ ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ. ಅವರಿಗೆ ಆಸ್ಪತ್ರೆ, ಆರೋಗ್ಯ ಸೇವೆ ದೊರಕುತ್ತಿಲ್ಲ. ಮನೆಯಿಲ್ಲದ ನಿರಾಶ್ರಿತರಿಗೆ ವಸತಿ, ಉದ್ಯೋಗಗಳನ್ನು ಸರ್ಕಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಆದಿವಾಸಿಗಳ ಮೇಲಿನ ನಿರ್ಲಕ್ಷದಿಂದಾಗಿ ಅವರ ಪರಿಸ್ಥಿತಿ ದಯನೀಯವಾಗಿದೆ. ವನಬಂಧು ಯೋಜನೆಗೆಂದು ಘೋಷಿಸಿದ 55 ಸಾವಿರ ಕೋಟಿ ರೂಪಾಯಿ ಎಲ್ಲಿಗೆ ಹೋಯಿತು ಮೋದಿಯವರೆ ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.
 ವನಬಂಧು ಯೋಜನೆಯನ್ನು 2014ರಲ್ಲಿ ಕೇಂದ್ರ ಸರ್ಕಾರ ದೇಶದ ಬುಡಕಟ್ಟು ಜನಾಂಗದವರ ಏಳಿಗೆ ಮತ್ತು ಒಟ್ಟಾರೆ ಅಭಿವೃದ್ಧಿಗೆ ಜಾರಿ ತಂದಿತ್ತು.
SCROLL FOR NEXT