ನವದೆಹಲಿ: ನನ್ನ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ ಯಾವುದೇ ರೀತಿಯ ಶಿಕ್ಷೆ ಎದುರಿಸಲು ಸಿದ್ಧ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ 'ನೀಚ ವ್ಯಕ್ತಿ ' ಹೇಳಿಕೆ ಸಂಬಂಧ ಭುಗಿಲೆದ್ದಿರುವ ಹಿನ್ನಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಅಮಾನತಾಗಿರುವ ಮಾಜಿ ಕೇಂದ್ರ ಸಚಿವ ಮಣಿ ಶಂಕರ್ ಅವರು ಇದೇ ಮೊದಲ ಬಾರಿಗೆ ವಿವಾಧ ಸಂಬಂಧ ಮಾತನಾಡಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ ಯಾವುದೇ ಶಿಕ್ಷೆಗೂ ತಾವು ಸಿದ್ಧ ಎಂದು ಹೇಳಿದ್ದಾರೆ.
"ನನ್ನ ಹೇಳಿಕೆ ಯಾವುದೇ ವಿವಾದ ಸೃಷ್ಟಿಸುವ ಸಂಬಂಧ ನೀಡಿದ್ದಾಗಿರಲಿಲ್ಲ. ಆದರೂ ನನ್ನ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ ನಾನು ಪಕ್ಷ ನೀಡುವ ಯಾವುದೇ ರೀತಿಯ ಶಿಕ್ಷೆಯನ್ನು ಸ್ವೀಕರಿಸುತ್ತೇನೆ, ಕಾಂಗ್ರೆಸ್ ಪಕ್ಷ ನನಗೆ ಅಗತ್ಯಕ್ಕಿಂತ ಮೀರಿದ್ದನ್ನು ಕೊಟ್ಟಿದೆ. ನನ್ನಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗುವುದು ನನಗಿಷ್ಟವಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.