ಘಾಜಿಯಾಬಾದ್: ಇಲ್ಲಿನ ಉಕ್ಕಿನ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ದಂಪತಿಗಳನ್ನು ಕಟ್ಟಿ ಹಾಕಿ ಸುಮಾರು 2 ಗಂಟೆಗಳ ಕಾಲ ಸಲಾಡ್ ಜತೆ ಬಿಯರ್ ಕುಡಿದು ನಂತರ ಹಣ, ಚಿನ್ನಾಭರಣ ಮತ್ತು ಎಸ್ಯುವಿ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನೆಹರೂ ನಗರದಲ್ಲಿ ನಡೆದಿದೆ.
ಘಾಜಿಯಾಬಾದ್ ನ ನೆಹರೂ ನಗರದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಕಟ್ಟಿಹಾಕಿದ್ದ ಹಗ್ಗವನ್ನು ಬಿಡಿಸಿಕೊಂಡ ದಂಪತಿಗಳು ಕಿಟಕಿಯಿಂದ ಜೋರಾಗಿ ಕೂಗಿಕೊಂಡಿದ್ದು ಅಕ್ಕಪಕ್ಕದ ಮನೆಯವರು ಬಂದು ಮನೆಯ ಮುಂಬಾಗಿಲನ್ನು ತೆರೆದ ನಂತರ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಉಕ್ಕಿನ ವ್ಯಾಪಾರಿ ನರೇಂದ್ರ ಕುಮಾರ್ ಅಗರ್ವಾಲ್ ಮನೆಗೆ ಮೂವರು ಶಸ್ತ್ರಾಸ್ತ್ರಧಾರಿ ಕಳ್ಳರು ರಾತ್ರಿ 9 ಗಂಟೆ ಸುಮಾರಿಗೆ ನುಗ್ಗಿದ್ದು ದಂಪತಿಗಳಿಗೆ ಗನ್ ತೋರಿಸಿ ಅವರನ್ನು ಹಗ್ಗದಿಂದ ಕಟ್ಟಿಹಾಕಿದ್ದಾರೆ. ನಂತರ ಮನೆಯಲ್ಲಿದ್ದ 7 ಲಕ್ಷ ನಗದು, 20 ಲಕ್ಷ ಮೌಲ್ಯದ ಚಿನ್ನಾಭರಣ, ಪರವಾನಗಿ ಹೊಂದಿರುವ ಪಿಸ್ತೂಲ್, ಮೊಬೈಲ್ ಗಳು ಮತ್ತು ಆರು ವಿಸ್ಕಿ ಬಾಟಲಿಗಳನ್ನು ತೆಗೆದುಕೊಂಡು ವ್ಯಾಪಾರಿ ಎಸ್ಯುವಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಕಳ್ಳತನದ ವೇಳೆ ವ್ಯಾಪಾರಿಯ ಮಗ ಹಾಗೂ ಸೊಸೆ ಪ್ರವಾಸಕ್ಕೆ ತೆರಳಿದ್ದರು. ಈ ಹಿನ್ನಲೆಯಲ್ಲಿ ಮನೆಯಲ್ಲಿ ದಂಪತಿಗಳು ಮಾತ್ರ ಇದ್ದರು. ಕಳ್ಳತನ ಮಾಡಿದ ನಂತರ ಮೂವರು ಕಳ್ಳರು ಫ್ರಿಡ್ಜ್ ನಲ್ಲಿದ್ದ ಹಣ್ಣು, ತರಕಾರಿಯಿಂದ ಸಲಾಡ್ ತಯಾರಿಸಿಕೊಂಡು ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಿಯರ್ ಕುಡಿದು ನಂತರ ಪರಾರಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos