ನವದೆಹಲಿ: 2ಜಿ ತರಂಗಾಂತರ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಹಗರಣದ ಪ್ರಮುಖ ಆರೋಪಿಗಳಾಗಿದ್ದ ಕರುಣಾನಿಧಿ ಪುತ್ರಿ ಕನ್ನಿಮೋಳಿ, ಸಂಬಂಧಿ ಎ ರಾಜಾ ಅವರನ್ನೂ ಸೇರಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ. ಅಲ್ಲದೆ ತನಿಖಾ ಸಂಸ್ಥೆ ಮೇಲ್ಮನೆ ಕೋರ್ಟ್ ಗೆ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದರೆ, ಎಲ್ಲ ಆರೋಪಿಗಳು 5 ಲಕ್ಷ ಭದ್ರತಾ ಠೇವಣಿ ಇಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ರು. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಡಿಎಂಕೆ ಮುಖಂಡ, ಮಾಜಿ ಟೆಲಿಕಾಂ ಸಚಿವ ಎ.ರಾಜಾ ಹಾಗೂ ಕರುಣಾನಿಧಿ ಪುತ್ರಿ ಕನ್ನಿಮೋಳಿ ಸಹಿತ 17 ಮಂದಿ ಪ್ರಮುಖ ಆರೋಪಿಗಳು ಎಂದು ಈ ಹಿಂದೆ ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ದಾಖಲಿದ್ದರು. ಅಲ್ಲದೆ ಸತತ 6 ವರ್ಷಗಳ ಈ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿತ್ತು.
ಜಾರಿ ನಿರ್ದೇಶನಾಲಯ, ಸಿಬಿಐ ಆರೋಪಗಳನ್ನು ತಳ್ಳಿ ಹಾಕಿದ ನ್ಯಾಯಧೀಶ ಒ.ಪಿ.ಸೈನಿ ಅವರು ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದ್ದಾರೆ. ನಿಯಮ ಉಲ್ಲಂಘಿಸಿ 2ಜಿ ಹಂಚಿಕೆಯಿಂದ 30,000ಕೋ.ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು. ಹಗರಣ ಸಂಬಂಧ ನ್ಯಾಯಾಲಯ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿತ್ತು. ಒಂದು ಪ್ರಕರಣ ಜಾರಿ ನಿರ್ದೇಶನಾಲಯ, ಇನ್ನೆರಡು ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಿ ತನ್ನ ವರದಿ ಸಲ್ಲಿಸಿತ್ತು.