ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಸಿಂಗ್
ಚಂಡೀಗಢ: ಕೇವಲ ಕುಲಭೂಷಣ್ ಜಾಧವ್ ಪತ್ನಿಯಷ್ಟೇಯಲ್ಲ, ಸರಬ್ಜಿತ್ ಸಿಂಗ್ ಪತ್ನಿಯ ಹಣೆಯ ಮೇಲಿದ್ದ ಕುಂಕುಮವನ್ನೂ ಪಾಕಿಸ್ತಾನದ ಅಧಿಕಾರಿಗಳು ಅಳಿಸಿದ್ದರು ಎಂದು ಪಾಕಿಸ್ತಾನದ ಕ್ರೌರ್ಯತೆ ಹಾಗೂ ಅಮಾನವೀಯತೆಯನ್ನು ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಸಿಂಗ್ ಅವರು ಗುರುವಾರ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ಕುರಿತಂತೆ ಮಾತನಾಡಿರುವ ದಲ್ಬೀರ್ ಕೌರ್ ಅವರು, 2008ರಲ್ಲಿ ಲಾಹೋರ್ ಜೈಲಿಗೆ ಸರಬ್ಜಿತ್ ಕುಟುಂಬ ಭೇಟಿ ನೀಡಿತ್ತು. ಭೇಟಿಗೂ ಮುನ್ನ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುತ್ತಾರೆಂದು ನಾವು ತಿಳಿದಿರಲಿಲ್ಲ. ಭೇಟಿ ವೇಳೆ ನಾನು, ಸರಬ್ಜಿತ್ ಪತ್ನಿ ಸುಖ್ಪ್ರೀತ್ ಕೌರ್, ಮಕ್ಕಳಾದ ಸ್ವಪನ್ದೀಪ್ ಹಾಗೂ ಪೂನಮ್ ಹೋಗಿದ್ದೆವು. 18 ವರ್ಷಗಳ ಬಳಿಕ ನಾವು ಸರಬ್ಜಿತ್ ನನ್ನು ಭೇಟಿ ಮಾಡಲು ಹೋಗಿದ್ದೆವು. ಜಾಧವ್ ಕುಟುಂಬಸ್ಥರೊಂದಿಗೆ ಇಂದು ಪಾಕಿಸ್ತಾನ ಹೇಗೆ ನಡೆದುಕೊಂಡಿದೆಯೋ ಅದೇ ರೀತಿ ನಮ್ಮೊಂದಿಗೂ ನಡೆದುಕೊಂಡಿತ್ತು ಎಂದು ಹೇಳಿದ್ದಾರೆ.
ಭೇಟಿಗೂ ಮುನ್ನವೇ ಪಾಕಿಸ್ತಾನ ಅಧಿಕಾರಿಗಳು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದರು. ಮಹಿಳಾ ಪೇದೆಯೊಬ್ಬರು ನಮ್ಮ ಬಳಿ ಬಂದು ಸುಖ್ಪ್ರೀತ್ ಹಣೆಯಲ್ಲಿದ್ದ ಕುಂಕುಮವನ್ನು ಕರವಸ್ತ್ರದಿಂದ ಅಳಿಸಿದ್ದಳು. ಅಲ್ಲದೆ, ತಲೆಯಲ್ಲಿ ಹಾಗಿದ್ದ ಪಿನ್ ಗಳನ್ನು ತೆಗೆಯುವಂತೆ ಸೂಚಿಸಿದ್ದರು. ಸರಬ್ಜಿತ್ ಪುತ್ರಿಯರೊಂದಿಗೂ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡಿದ್ದರು.
ಸರಬ್ಜಿತ್ ಗೆ ಭರ್ವಾನ್ ಕರೇಲಾ (ತಿನಿಸು) ಎಂದರೆ ಬಹಳ ಇಷ್ಟ. ಹೀಗಾಗಿ 18 ವರ್ಷಗಳ ಬಳಿಕ ಆತನನ್ನು ಭೇಟಿಯಾಗುತ್ತಿದ್ದರಿಂದ ಪ್ರೀತಿಯಿಂದ ಆತನಿಗಾಗಿ ಆ ತಿನಿಸನ್ನು ಮಾಡಿಕೊಂಡು ಹೋಗಿದ್ದೆವು. ಆದರೆ, ಪಾಕಿಸ್ತಾನದ ಅಧಿಕಾರಿಗಳು ಅದನ್ನು ಪರಿಶೀಲನೆ ನಡೆಸಿದ್ದರು. ಮೊದಲು ನಮ್ಮ ಬಾಯಿಗೆ ಹಾಕಿ ತಿನ್ನುವಂತೆ ಸೂಚಿಸಿದ್ದರು. ಸರಬ್ಜಿತ್ ಜೈಲಿನಲ್ಲಿರುವಾಗಲೇ ಲಾಹೋರ್'ನ ಅಧಿಕಾರಿಗಳು ಪಾಸ್ ಪೋರ್ಟ್ ಗಳನ್ನು ನಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಭೇಟಿ ಅಂತ್ಯಗೊಂಡ ಬಳಿಕ ಹಿಂತಿರುಗುವ ವೇಳೆ ಪಾಸ್'ಪೋರ್ಟ್ ತೋರಿಸುವಂತೆ ಹೇಳಿದರು. ಭಾರತಕ್ಕೆ ಬರುವ ವೇಳೆಯೂ ಪಾಕಿಸ್ತಾನ ಮಾಹಿತಿಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ವಿಳಂಬ ಮಾಡಿದರು.
2011ರಲ್ಲಿ ಮತ್ತೆ ಸರಬ್ಜಿತ್ ನನ್ನು ಭೇಟಿ ಮಾಡಲು ಹೋಗಿದ್ದೆ. ಆಗ ನನಗೊಬ್ಬಳಿಗೆ ಮಾತ್ರ ವೀಸಾ ದೊರಕಿತ್ತು. ಆ ಸಂದರ್ಭದಲ್ಲಿಯೂ ಪಾಕಿಸ್ತಾನದ ಅಧಿಕಾರಿಗಳು ಕೆಟ್ಟದಾಗಿ ನಡೆದುಕೊಂಡಿದ್ದರು. ನಾನು ಧರಿಸಿದ್ದ ಕಿರ್ಪಾನ್'ನ್ನು (ಸಿಖ್ಖರು ಧರಿಸುವ ಸಣ್ಣ ಕತ್ತಿ) ಕಿತ್ತು ಹಾಕಿದ್ದರು. ಅದನ್ನು ಸುರಕ್ಷಿತವಾಗಿಡುವಂತೆ ತಿಳಿಸಿದಾಗ ನನ್ನ ಎದುರಿಗೇ ಅದನ್ನು ತೆಗೆದು ಮೂಲೆಗೆ ಎಸೆದಿದ್ದರು. ಪಾಕಿಸ್ತಾನ ಈ ನಡವಳಿಕೆ ನನ್ನ ಧಾರ್ಮಿಕ ನಂಬಿಕೆ ನೋವನ್ನುಂಟು ಮಾಡಿತ್ತು. ಆ ವೇಳೆ ಸರಬ್ಜಿತ್ ನನ್ನು ಭೇಟಿಯಾದಾಗ ಆತ ಜೋರಾಗಿ ಅತ್ತು. ನನ್ನ ಮುಗ್ಧತೆಯನ್ನು ಸಾಬೀತುಪಡಿಸಿ ಸಹಾಯ ಮಾಡುವಂತೆ ಬೇಡಿಕೊಂಡಿದ್ದ ಎಂದು ದಲ್ಬೀರ್ ಕೌರ್ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos