ಅಲಹಾಬಾದ್: 17 ನಕಲಿ ಬಾಬಾಗಳು ಮತ್ತು ಸ್ವಯಂ ಘೋಷಿತ ದೇವಮಾನವರ ಎರಡನೇ ಪಟ್ಟಿಯನ್ನು ಅಖಿಲ ಭಾರತೀಯ ಅಖರ ಪರಿಷತ್ ಬಿಡುಗಡೆ ಮಾಡಿದೆ.
ಹೊಸ ಪಟ್ಟಿಯಲ್ಲಿ ದೆಹಲಿಯ ವೀರೇಂದ್ರ ದೇವ ದೀಕ್ಷಿತ್, ಉತ್ತರ ಪ್ರದೇಶದ ಬಸ್ತಿಯ ಸಚ್ಚಿದಾನಂದ ಸರಸ್ವತಿ ಮತ್ತು ಅಲಹಾಬಾದಿನ ತ್ರಿಲಾಕ್ ಭವಂತ್ ಇದ್ದಾರೆ.
ಹಿಂದೂ ಸಾಧುಗಳ ಕೇಂದ್ರ ಅಂಗ ಕಳೆದ ಸೆಪ್ಟೆಂಬರ್ ನಲ್ಲಿ 14 ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್, ರಾಧೆ ಮಾ, ನಿರ್ಮಲಾ ಬಾಬಾ, ರಾಂಪಲ್, ಅಸರಮ್ ಬಾಪು ಮತ್ತು ಆತನ ಪುತ್ರ ನಾರಾಯಣ್ ಸಾಯಿ ಸೇರಿದ್ದಾರೆ.
ಕಳೆದ ವಾರ 47 ಮಹಿಳೆಯರನ್ನು ಮತ್ತು 6 ಅಪ್ರಾಪ್ತ ಬಾಲಕಿಯರನ್ನು ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ನಕಲಿ ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಅಕ್ರಮವಾಗಿ ನಡೆಸುತ್ತಿರುವ ಮೂರು ಕೇಂದ್ರಗಳಿಂದ ರಕ್ಷಿಸಿದ್ದರು. ದ್ವಾರಕ ಆಶ್ರಮ ಜೈಲು ತರಹದ ಆವರಣವನ್ನು ಹೊಂದಿದ್ದು ಅಲ್ಲಿ ಜನರನ್ನು ಕೈದಿಗಳಂತೆ ಬಂಧಿಸಿಡಲಾಗಿತ್ತು ಎಂದು ದೆಹಲಿ ಮಹಿಳಾ ಆಯುಕ್ತೆ ಸ್ವಾತಿ ಮಳಿವಾಳ ತಿಳಿಸಿದ್ದಾರೆ.
17 ಮಂದಿ ನಕಲಿ ಬಾಬಾಗಳ ಪಟ್ಟಿಯಲ್ಲಿ ವೀರೇಂದ್ರ ದೇವ್ ದೀಕ್ಷಿತ್, ಸಚ್ಚಿದಾನಂದ ಸರಸ್ವತಿ, ತ್ರಿಕಾಲ್ ಬವಂತ್, ಅಸರಮ್ ಬಾಪು, ರಾಧೆ ಮಾ, ಸಚ್ಚಿದಾನಂದ ಗಿರಿ, ಗುರ್ಮೀತ್ ರಾಮ್ ರಹಿಂ ಸಿಂಗ್, ಸ್ವಾಮಿ ಒಮ್ಜಿ, ನಿರ್ಮಲ್ ಬಾಬಾ, ಇಚ್ಚಾದರಿ ಭೀಮಾನಂದ್, ಸ್ವಾಮಿ ಅಮೀಮಾನಂದ್, ನಾರಾಯಣ್ ಸಾಯಿ, ರಾಂಪಲ್, ಆಚಾರ್ಯ ಕುಶ್ಮುನಿ, ಬೃಹಸ್ಪತಿ ಗಿರಿ, ಓಂ ನಮಃ ಶಿವಾಯ್ ಬಾಬಾ ಮತ್ತು ಮಲ್ಕನ್ ಸಿಂಗ್ ಸೇರಿದ್ದಾರೆ.
ಪಟ್ಟಿಯನ್ನು ಬಿಡುಗಡೆ ಮಾಡಿದ ಒಕ್ಕೂಟದ ಅಧ್ಯಕ್ಷ ಸ್ವಾಮಿ ನರೇಂದ್ರ ಗಿರಿ, ಇಂತಹ ನಕಲಿ ಬಾಬಾಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಇಂತಹ ನಕಲಿ ಬಾಬಾಗಳು ಸಾಧು ಮತ್ತು ಸನ್ಯಾಸಿಗಳಿಗೆ ಅಗೌರವ ತರುತ್ತಾರೆ ಎಂದರು.
ಸ್ವಯಂ ಘೋಷಿತ ದೇವಮಾನವರ ಬಗ್ಗೆ ಉಂಟಾಗಿರುವ ವಿವಾದಗಳಿಂದಾಗಿ ಪರಿಷತ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2019ರ ಕುಂಭಮೇಳದ ಕೆಲಸಗಳ ಬಗ್ಗೆ ಸೂಕ್ಷ್ಮ ಗಮನಹರಿಸಬೇಕೆಂದು ಸಮಿತಿ ರಚಿಸಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಒತ್ತಾಯಿಸಲು ನಾವು ನಿರ್ಣಯ ಹೊರಡಿಸಿದ್ದೇವೆ. ಪ್ರತಿ ಅಖರಗಳ ಸದಸ್ಯರು ಈ ಸಮಿತಿಯಲ್ಲಿರಬೇಕೆಂದು ನಾವು ಒತ್ತಾಯಿಸಿದ್ದೇವೆ ಎಂದು ಗಿರಿ ಹೇಳಿದರು.