ನವದೆಹಲಿ: ಮದ್ಯ ದೊರೆ ವಿಜಯ್ ಮಲ್ಯ ಅವರು ದೇಶ ಬಿಟ್ಟು ಹೋಗದಂತೆ ತಡೆಯಲು ಸರ್ಕಾರ ಒಂದೆಡೆ ಕಾನೂನು ರಚಿಸಲು ಯೋಚಿಸುತ್ತಿದ್ದರೆ, ಎನ್ ಡಿಎ ಮತ್ತು ಯುಪಿಎ ಎಂಬ ಎರಡು ಸ್ಪರ್ಧಾತ್ಮಕ ತಂಡಗಳು ನನ್ನನ್ನು ಫುಟ್ ಬಾಲ್ ರೀತಿ ಒದೆಯುತ್ತಿವೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಸಿಬಿಐ ನಡೆಸುತ್ತಿರುವ ತನಿಖೆ ಮತ್ತು ಇಂಗ್ಲೆಂಡ್ ನಿಂದ ಹೊರಗೋಡಿಸಲು ನಡೆಯುತ್ತಿರುವ ಪ್ರಯತ್ನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಾಧ್ಯಮವನ್ನು ತಮ್ಮ ವಿರುದ್ಧ ಬಳಸಲಾಗುತ್ತಿದೆ ಎಂದರು.
ಮಾಧ್ಯಮವನ್ನು ಸಂತೋಷವಾಗಿ ಪಿಚ್ ಆಗಿ ಬಳಸಿಕೊಳ್ಳಲಾಗುತ್ತಿದೆ. ನಾನಿಲ್ಲಿ ಫುಟ್ ಬಾಲ್. ಎರಡು ಸ್ಪರ್ಧಾತ್ಮಕ ತಂಡಗಳಾದ ಎನ್ ಡಿಎ ಮತ್ತು ಯುಪಿಎಗಳು ಆಡುತ್ತಿವೆ. ದುರದೃಷ್ಟವಶಾತ್ ಯಾವುದೇ ತೀರ್ಪುಗಾರರಿಲ್ಲ ಎಂದು ಮಲ್ಯ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ ಅರುಣ್ ಜೇಟ್ಲಿಯವರು, ಇಂತಹ ಸಾಲ ಬಾಕಿಯಿಟ್ಟಿರುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ಅವರ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದರು. ಇತ್ತೀಚೆಗೆ ಭಾರೀ ಮೊತ್ತದ ಸಾಲವನ್ನು ಪಾವತಿಸದೆ ದೇಶ ಬಿಟ್ಟು ಹೋದವರು ಇದ್ದಾರೆ. ಕಾನೂನಿನ ಕೈಯಲ್ಲಿ ಶಿಕ್ಷೆಯನ್ನು ತಪ್ಪಿಸಲು ಹೀಗೆ ಮಾಡುತ್ತಿದ್ದಾರೆ. ಇವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ನೀಡಲಾಗುವುದು ಎಂದು ಜೇಟ್ಲಿ ಹೇಳಿದ್ದರು.
ಕೇವಲ ಸರ್ಕಾರಕ್ಕೆ ಮಾತ್ರವಲ್ಲದೆ ಸಿಬಿಐ ಕೂಡ ತಮ್ಮ ವಿರುದ್ಧ ತಪ್ಪಾಗಿ ಆರೋಪಗಳನ್ನು ಮಾಡುತ್ತಿದೆ. ಪೊಲೀಸರ ತಂಡಕ್ಕೆ ಉದ್ಯಮ ಮತ್ತು ದೇಶದ ಆರ್ಥಿಕತೆಯ ಬಗ್ಗೆ ಏನು ತಿಳಿದಿದೆ ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಐಡಿಬಿಐ ಬ್ಯಾಂಕಿನಿಂದ ಪಡೆದುಕೊಂಡ 720 ಕೋಟಿ ರೂಪಾಯಿ ಸಾಲವನ್ನು ಹಿಂತಿರುಗಿಸದ್ದಕ್ಕೆ ಸಿಬಿಐ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು ಇಂಗ್ಲೆಂಡಿನಿಂದ ಗಡೀಪಾರನ್ನು ಬಯಸುತ್ತಿದೆ.
ಕಿಂಗ್ ಫಿಶರ್ ಏರ್ ಲೈನ್ಸ್ ಗೆ ವಿವಿಧ ಬ್ಯಾಂಕ್ ಗಳಿಂದ 9,000 ಕೋಟಿ ರೂಪಾಯಿ ಸಾಲ ಪಡೆದುಕೊಂಡು ಮರುಪಾವತಿಸದೆ ಕಳೆದ ಮಾರ್ಚ್ 2ರಂದು ವಿಜಯ್ ಮಲ್ಯ ಭಾರತ ತೊರೆದು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos