ದೇಶ

ಅಖಿಲೇಶ್ ಸರ್ಕಾರ ರಾಜಕೀಯ ಲಾಭಕ್ಕಾಗಿ ಯುವಕರ ಆಶೋತ್ತರಗಳ ಜೊತೆ ಆಟವಾಡುತ್ತಿದೆ: ಮೋದಿ

Sumana Upadhyaya
ಬಡೌನ್(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ವಿರುದ್ಧ ದಾಳಿ ಆರಂಭಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜಕೀಯ ಲಾಭಕ್ಕಾಗಿ ಉತ್ತರ ಪ್ರದೇಶದಲ್ಲಿ ಸರ್ಕಾರ ಯುವಕರ ಆಕಾಂಕ್ಷೆಗಳ ಜೊತೆ ಆಟವಾಡುತ್ತಿದೆ ಎಂದು ಆಪಾದಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಅಖಿಲೇಶ್ ಯಾದವ್ ಸರ್ಕಾರ ಯುವಕರ ಆಸೆ, ಆಕಾಂಕ್ಷೆಗಳ ಜೊತೆ ಆಟವಾಡುತ್ತಿದೆ. ಅಖಿಲೇಶ್ ಯಾದವ್ ಅವರು ರಾಜ್ಯದಲ್ಲಿ ಅಪರಾಧಿಗಳಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಬದೌನ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಅವರು, ಬದೌನ್ ನಲ್ಲಿ ಅಭಿವೃದ್ಧಿಯಾಗದಿರುವ ಬಗ್ಗೆ ಪ್ರಶ್ನಿಸಿದರು.
ಬದೌನ್ ಉತ್ತರ ಪ್ರದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಗುಜರಾತ್ ನಲ್ಲಿ ಇದ್ದಾಗ ಬದೌನ್ ಬಗ್ಗೆ ಕೇಳಿದ್ದೆ. ಬಹುಜನ ಸಮಾಜವಾದಿ ಮತ್ತು ಸಮಾಜವಾದಿ ಪಕ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯ ಈ ಪ್ರದೇಶವನ್ನು  ತಲುಪಿಲ್ಲ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರದ ನೋಟುಗಳ ಅಮಾನ್ಯತೆಯನ್ನು ಟೀಕಿಸುವ ವಿರೋಧ ಪಕ್ಷಗಳಿಗೆ ಇಂದು ಮತ್ತೆ ತಿರುಗೇಟು ನೀಡಿದ ಅವರು, ಭ್ರಷ್ಟಾಚಾರ ವಿರುದ್ಧ ಕ್ರಮ ತೆಗೆದುಕೊಂಡಾಗ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ವಿರುದ್ಧ  ತಿರುಗಿಬಿದ್ದವು ಎಂದು ಹೇಳಿದ್ದಾರೆ.
SCROLL FOR NEXT