ಬ್ರಿಟನ್ ಸಂಸದರ ನಿಯೋಗದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ:ಭಯೋತ್ಪಾದನೆ, ಉಗ್ರಗಾಮಿತ್ವ ಮತ್ತು ತೀವ್ರಗಾಮಿತ್ವದ ಬಗ್ಗೆ ಬ್ರಿಟನ್ ಸಂಸದರ ಗಮನ ಸೆಳೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಮತ್ತು ಇಂಗ್ಲೆಂಡ್ ಗಳು ಸ್ವಾಭಾವಿಕ ಸಹಭಾಗಿಗಳು ಎಂದು ಹೇಳಿದ್ದಾರೆ.
ಭಾರತಕ್ಕೆ ಭೇಟಿ ನೀಡಿದ ಬ್ರಿಟಿನ್ ನ 8 ಮಂದಿ ಸಂಸದರ ನಿಯೋಗವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ಮತ್ತು ಇಂಗ್ಲೆಂಡ್ ಎರಡೂ ರಾಷ್ಟ್ರಗಳು ಪರಸ್ಪರ ಉಭಯಪಕ್ಷೀಯ ಬೆಂಬಲವನ್ನು ಹೊಂದಿವೆ. ಎರಡೂ ದೇಶಗಳ ಸಂಸದರ ಮಧ್ಯೆ ವ್ಯಾಪಕ ಮಾತುಕತೆಗಳು ನಡೆಯುತ್ತಿರಬೇಕು ಎಂದು ಕರೆ ನೀಡಿದರು.
ಕಾಶ್ಮೀರದಲ್ಲಿ ಹಿಂಸೆ ಏರಿಕೆ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಜನವರಿ 20ರಂದು ಇಂಗ್ಲೆಂಡ್ ಸಂಸತ್ತು ಚರ್ಚೆ ನಡೆಸಿ ನಿಲುವಳಿ ಹೊರಡಿಸಿದ್ದ ಹಿನ್ನೆಲೆಯಲ್ಲಿ ಬ್ರಿಟನ್ ಸಂಸದರ ಜೊತೆ ಪ್ರಧಾನಿಯವರ ಸಂವಾದ ಮಹತ್ವ ಪಡೆದಿದೆ.
ಕಾಶ್ಮೀರದ ಹಿತದೃಷ್ಟಿಯಿಂದ ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೈಗೊಂಡ ನಿರ್ಣಯದಂತೆ ಭಾರತ ಮತ್ತು ಪಾಕಿಸ್ತಾನಗಳು ಶಾಶ್ವತ ಪರಿಹಾರ ಕಂಡುಕೊಳ್ಳಲು ಶಾಂತಿ ಒಪ್ಪಂದಕ್ಕೆ ಆರಂಭ ಮಾಡಬೇಕು ಎಂದು ಬ್ರಿಟನ್ ಸಂಸತ್ತು ಹೊರಡಿಸಿರುವ ನಿರ್ಣಯದಲ್ಲಿ ಕರೆ ನೀಡಿತ್ತು.
ಗಡಿ ಭಯೋತ್ಪಾದನೆ ಪಾಕಿಸ್ತಾನದ ಕುಕೃತ್ಯವಾಗಿದ್ದು ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಯಾವುದೇ ನಿರ್ಣಯ ಹೊರಡಿಸಲು ಮತ್ತು ಎರಡೂ ರಾಷ್ಟ್ರಗಳ ಮಧ್ಯೆ ಶಾಂತಿ ಮಾತುಕತೆ ನಡೆಸಲು ತಡೆಯೊಡ್ಡುತ್ತಿದೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ತಾವು 2015ರಲ್ಲಿ ಇಂಗ್ಲೆಂಡ್ ಗೆ ಭೇಟಿ ನೀಡಿದ ಸಂದರ್ಭ ಮತ್ತು ಅಲ್ಲಿನ ಪ್ರಧಾನಿ ತೆರೆಸಾ ಮೆ ಕಳೆದ ವರ್ಷ ಭೇಟಿ ನೀಡಿದ ಸಂದರ್ಭವನ್ನು ಅಲ್ಲಿನ ಸಂಸದರೊಂದಿಗೆ ಹಂಚಿಕೊಂಡರು.
ಭಾರತ-ಇಂಗ್ಲೆಂಡ್ ಸಂಸ್ಕೃತಿ ವರ್ಷ 2017 ಕಾರ್ಯಕ್ರಮಕ್ಕೆ ಸಂಸದರನ್ನು ಪ್ರಧಾನಿ ಮೋದಿ ಆಹ್ವಾನಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos