ಕೊಪ್ಪಳ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೊಂದರೆಯಲ್ಲಿದ್ದ ಕುಟುಂಬವೊಂದಕ್ಕೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ 25 ವರ್ಷದ ಸೈಯದ್ ಫಾರೂಕ್ ಕ್ವಾದ್ರಿಯವರು ಕಳೆದ 17ರಂದು ದಕ್ಷಿಣ ಸೂಡಾನ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು. ಘಟನೆಯಿಂದ ಆಘಾತಕ್ಕೊಳಗಾದ ಯುವಕನ ತಂದೆ ಎಸ್.ಬಿ.ಕ್ವಾದ್ರಿ ಮತ್ತು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವಿಷಯವನ್ನು ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ತಂದರು.
ಅವರ ಅನಾರೋಗ್ಯದ ನಡುವೆಯೂ ಸಚಿವೆ ಸುಷ್ಮಾ ಸ್ವರಾಜ್ ಸೂಡಾನ್ ನಲ್ಲಿರುವ ಭಾರತೀಯ ರಾಯಭಾರಿಗಳ ಜೊತೆ ಮಾತನಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಿದರು ಎನ್ನುತ್ತಾರೆ ಕ್ವಾದ್ರಿ.
ಈ ಮುನ್ನ ಕ್ವಾದ್ರಿ ಕುಟುಂಬ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ವಾಸಿಸುತ್ತಿತ್ತು. ಅಲ್ಲಿಯೇ ಫಾರೂಕ್ ತನ್ನ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದ. ನಂತರ ಇಡೀ ಕುಟುಂಬ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಬಂದು ನೆಲೆಸಿತು.
ಫಾರೂಕ್ ಶಾಲಾ ದಿನಗಳಲ್ಲಿ ತುಂಬಾ ಚುರುಕು ಮತ್ತು ಬುದ್ಧಿವಂತ ಬಾಲಕನಾಗಿದ್ದ. ಸಂಬಂಧಿಕರ ನೆರವಿನೊಂದಿಗೆ ಆತನಿಗೆ ಸೂಡಾನ್ ನಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಹೋಗಿದ್ದ ಎನ್ನುತ್ತಾರೆ ಕ್ವಾದ್ರಿ.
ಸಚಿವೆ ಸುಷ್ಮಾ ಸ್ವರಾಜ್ ಅವರು ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದರಿಂದ ಫಾರೂಕ್ ಶವ ಇನ್ನು ಒಂದೆರಡು ದಿನಗಳಲ್ಲಿ ಬಂದು ತಲುಪುವ ನಿರೀಕ್ಷೆಯಿದೆ. ನಮ್ಮ ಬಂಧುಗಳು ಹೆಚ್ಚಿನವರು ಕರ್ನೂಲ್ ನಲ್ಲಿರುವುದರಿಂದ ಅಂತಿಮ ವಿಧಿ ವಿಧಾನವನ್ನು ಅಲ್ಲಿಯೇ ಮಾಡುತ್ತೇವೆ ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos