ಚೆನ್ನೈ: ಜ.2 ರಂದು ಹೊರಬಿದ್ದ ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಹಲವು ಪದಾಧಿಕಾರಿಗಳು/ ಸದಸ್ಯರು ವಜಾಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೆ ಮಾಜಿ ಸದಸ್ಯರಿಗೆ ಬಿಸಿಸಿಐ ನ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅಭಿನಂದನಾ ಸಮಾರಂಭ, ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದಾರೆ.
ಶ್ರೀನಿವಾಸನ್ ಅವರು ಆಯೋಜಿಸಿರುವ ಸಮಾರಂಭಕ್ಕೂ ಬಿಸಿಸಿಐಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಸಮಾರಂಭ ನಡೆಸುವ ಬಗ್ಗೆ ಬೆಂಗಳೂರಿನಲ್ಲಿ ಸಭೆಯನ್ನು ಕರೆಯಲಾಗಿದ್ದು, ಎಲ್ಲಾ ರಾಜ್ಯಗಳಿಗೂ ಆಹ್ವಾನ ಕಳಿಸಿಕೊಡಲಾಗಿದೆ. ಬಿಸಿಸಿಐ ನಲ್ಲೇ ಹಲವು ಬಣಗಳಿದ್ದು ಶ್ರೀನಿವಾಸನ್ ಆಯೋಜಿಸಲಾಗಿರುವ ಸಭೆಯಲ್ಲಿ ಕನಿಷ್ಠ 20 ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಘಟಕದ ಅಧಿಕಾರಿಯೊಬ್ಬರು, ಶ್ರೀನಿವಾಸನ್ ಅವರು ಆಯೋಜಿಸಿರುವುದು ಕೇವಲ ಖಾಸಗಿ ಸಮಾರಂಭವಷ್ಟೇ. ಕಳೆದ ಹಲವು ವರ್ಷಗಳಿಂದ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದೆವು. ಇತ್ತೀಚಿನ ಬೆಳವಣಿಗೆಗಳಿಂದಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ, ಆದ್ದರಿಂದ ಇದೊಂದು ಖಾಸಗಿ ಸಭೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಲೋಧಾ ಸಮಿತಿ, ಸುಪ್ರೀಂ ಕೋರ್ಟ್ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂಬ ವದಂತಿಗಳನ್ನು ಬಿಸಿಸಿಐ ರಾಜ್ಯ ಘಟಕದ ಅಧಿಕಾರಿಗಳು ನಿರಾಕರಿಸಿದ್ದಾರೆ.