ಅಪಘಾತ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ಆಪ್!
ನವದೆಹಲಿ: ಅಪಘಾತವಾದಾಗ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಬದಲು ಫೋಟೋ ಕ್ಲಿಕ್ಕಿಸುವ ಆತುರವೇ ಹೆಚ್ಚಾಗುತ್ತಿದೆ. ಆದರೆ ಸಾರ್ವಜನಿಕರು ಇನ್ನು ಮುಂದೆ ಅಪಘಾತ ಪ್ರಕರಣಗಳ ಫೋಟೋ ಕ್ಲಿಕ್ಕಿಸುವ ಮೂಲಕವೂ ಸಹ ಸಂತ್ರಸ್ತರಿಗೆ ಶೀಘ್ರವಾಗಿ ವೈದ್ಯಕೀಯ ನೆರವು ಸಿಗುವಂತೆ ಮಾಡಬಹುದಾಗಿದೆ!.
ಹೇಗೆ ಅಂದ್ರಾ? ಇದಕ್ಕಾಗಿ ಅಪಘಾತ ಪ್ರಕರಣಗಳ ಫೋಟೋ ಕ್ಲಿಕ್ಕಿಸುವ ಖಯಾಲಿ ಇರುವವರು ಮಾಡಬೇಕಿರುವುದು ಏನೆಂದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಡೇಟ್ ಮಾಡುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಹೊಸದಾಗಿ ಪ್ರಾರಂಭಿಸುವ ಆಪ್ ನಲ್ಲಿ ಫೋಟೋ ಅಥವಾ ಅಪಘಾತ ಪ್ರಕರಣದ ಬಗ್ಗೆ ಮಾಹಿತಿ ನೀಡಿದರೆ 108 ಆಂಬುಲೆನ್ಸ್ ಸೇವೆ ಆದಷ್ಟೂ ಶೀಘ್ರವೇ ಸಿಗುತ್ತದೆ. ಈ ಮೂಲಕ ಅಪಘಾತ ಸಂತ್ರಸ್ತರಿಗೆ ವೈದ್ಯಕೀಯ ನೆರವು ತ್ವರಿತವಾಗಿ ಸಿಗುವ, ಅಪಾಯದಿಂದ ಪಾರಾಗುವ ಸಾಧ್ಯತೆಗಳು ಹೆಚ್ಚುತ್ತವೆ.
ಮುಂದಿನ ವಾರ ಬಿಡುಗಡೆಯಾಗಲಿರುವ ಕೇಂದ್ರ ಸರ್ಕಾರದ ಎಂ-ಪರಿವಹನ್ (m-Parivahan) ಆಪ್ ವಾಹನ ಚಾಲಕರ ಡಿಎಲ್ ಆರ್ ಸಿ ಮಾಹಿತಿಯನ್ನು ಹೊಂದಿರಲಿದ್ದು ಅಪಘಾತ ಪ್ರಕರಣಗಳಲ್ಲಿ ಪ್ರಯೋಜನವಾಗುವುದರ ಜೊತೆಗೆ ಭದ್ರತೆಗೂ ಸಹ ಸಹಕಾರಿಯಾಗಿರಲಿದೆ. ಕ್ಯಾಬ್ ಬುಕ್ ಮಾಡುವ ಅಥವಾ ಆಟೋಗಳಲ್ಲಿ ಸಂಚರಿಸುವ ವೇಳೆ ವಾಹನದ ಸಂಖ್ಯೆಯನ್ನು ಆಪ್ ನಲ್ಲಿ ನಮೂದಿಸಿದರೆ, ವಾಹನ ಹಾಗೂ ಅದರ ಮಾಲಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಪ್ರಯಾಣಿಕರ ಭದ್ರತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ಕೇಂದ್ರ ಸಾರಿಗೆ ಕಾರ್ಯದರ್ಶಿ ಸಂಜಯ್ ಮಿತ್ರ ಹೇಳಿದ್ದಾರೆ.
ಅಪಘಾತ ಪ್ರಕರಣಗಳ ಫೋಟೋ ಕಳಿಸುವಾಗ ಅಥವಾ ಅದರ ಬಗ್ಗೆ ಮಾಹಿತಿಯನ್ನು ನೀಡುವಾಗ ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿರಿಸಲಾಗುತ್ತದೆ. ಬಳಕೆದಾರರು ಆಧಾರ್ ಆಧಾರಿತ ಒಟಿಪಿ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅಪಘಾತ ಪ್ರಕರಣಗಳ ಬಗ್ಗೆ ಆಪ್ ನಲ್ಲಿ ಮಾಹಿತಿ ದಾಖಲಿಸುತ್ತಿದ್ದಂತೆಯೇ ಆ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತದೆ, ತಕ್ಷಣವೇ 108 ಆಂಬುಲೆನ್ಸ್ ಸೇವೆ ಸಂತ್ರಸ್ತರ ನೆರವಿಗೆ ಧಾವಿಸುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos