ದೇಶ

ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್ ವಿರುದ್ಧ ಸಿಬಿಐನಿಂದ ಅಂತಿಮ ವರದಿ ಸಲ್ಲಿಕೆ

Srinivas Rao BV
ನವದೆಹಲಿ:ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಕಾಂಗ್ರೆಸ್ ನಾಯಕ ನವೀನ್ ಜಿಂದಾಲ್, ಕಲ್ಲಿದ್ದಲು ಖಾತೆ ಮಾಜಿ ರಾಜ್ಯ ಸಚಿವ ದಸರಿ ನಾರಾಯಣ್ ರಾವ್ ವಿರುದ್ಧ ಸಿಬಿಐ ಅಂತಿಮ ವರದಿ ಸಲ್ಲಿಸಿದೆ. 
ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಸಿಬಿಐ ಹೆಚ್ಚಿನ ತನಿಖೆ ನಡೆಸಿದ್ದು, ಅಂತಿಮ ವರದಿ ಸಲ್ಲಿಸಿದೆ. ಆದರೆ ಸರಿಯಾದ ಕ್ರಮದಲ್ಲಿ ವರದಿ ಸಲ್ಲಿಸದೇ ಇರುವ ತನಿಖಾಧಿಕಾರಿಯ ನಡೆಯನ್ನು ಕೋರ್ಟ್ ಆಕ್ಷೇಪಿಸಿದ್ದು, ಜ.23 ರೊಳಗೆ ಸರಿಯಾದ ಸ್ವರೂಪದಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 
ಸಿಬಿಐ ಜ.13 ರಂದು ಸಲ್ಲಿಸಿರುವ ವರದಿಯಲ್ಲಿ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಅಂಶಗಳು, ಸಾಕ್ಷಿಗಳ ಪಟ್ಟಿ ಹಾಗೂ ದಾಖಲಾಗಿರುವ ಅವರ ಹೇಳಿಕೆಗಳಿವೆ. ಅಂತಿಮ ವರದಿ ಸಲ್ಲಿಸುವುದು ವಿಳಂಬವಾಗುತ್ತಿರುವುದು  ಪ್ರಕರಣದ ವಿಚಾರಣೆಯ ಪ್ರಗತಿಗೆ ಅಡ್ಡಿ ಉಂಟುಮಾಡುತ್ತಿದೆ ಎಂದು ಕೋರ್ಟ್ ಈ ಹಿಂದೆ ಸಿಬಿಐ ನ್ನು ತರಾಟೆಗೆ ತೆಗೆದುಕೊಂಡಿತ್ತು. 
ಕಲ್ಲಿದ್ದಲು ಹಗರಣ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸುರೇಶ್‌ ಸಿಂಘಾಲ್‌ ಚಾರ್ಟರ್ಡ್ ಅಕೌಂಟೆಂಟ್ ಸುರೇಶ್ ಸಿಂಘಾಲ್ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದ್ದ ಹಿನ್ನೆಲೆಯಲ್ಲಿ ಮತ್ತಷ್ಟು ತನಿಖೆ ನಡೆಸಲು ಸಿಬಿಐ ಹೆಚ್ಚಿನ ಕಾಲಾವಕಾಶ ಕೋರಿತ್ತು. 
SCROLL FOR NEXT