ದೇಶ

ಆರ್ ಎಸ್ಎಸ್ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಬೇಕು: ಎಲ್ ಕೆ ಅಡ್ವಾಣಿ

Srinivas Rao BV
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಿ, ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕೆಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ. 
ಮಹಿಳೆಯರಿಗೆ ಸಂಘಟನೆಯಲ್ಲಿ ಅತ್ಯುನ್ನತ ಹುದ್ದೆಗಳನ್ನು ನೀಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜವನ್ನು ಹಾಡಿ ಹೊಗಳಿರುವ ಎಲ್ ಕೆ ಅಡ್ವಾಣಿ, ಇದೇ ಮಾದರಿಯನ್ನು ಆರ್ ಎಸ್ಎಸ್ ಹಾಗೂ ಇನ್ನಿತರ ಸಂಘಟನೆಗಳು ಅಳವಡಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ. 
ಮಹಿಳೆಯರಿಂದಲೇ ನಡೆಸಲಾಗುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದಂತಹ ಬೇರೆ ಸಂಘಟನೆಗಳನ್ನು ನೋಡಿಲ್ಲ. ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನಾನು ಒಂದು ಸಂಘಟನೆಯೊಂದಿಗೆ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ನನ್ನನ್ನು ಭೇಟಿ ಮಾಡಿದವರಿಗೆಲ್ಲಾ, ಬ್ರಹ್ಮಕುಮಾರಿ ಸಮಾಜದ ಮಾದರಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳುತ್ತೇನೆ ಎಂದಿದ್ದಾರೆ ಅಡ್ವಾಣಿ. 
ಆರ್ ಎಸ್ಎಸ್ ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಆದರೆ ಬಾಲ್ಯದಿಂದಲೇ ಯುವಕರನ್ನು ತಯಾರು ಮಾಡುತ್ತಿರುವ ಆರ್ ಎಸ್ಎಸ್ ಕೇವಲ ಪುರುಷರಿಗೆ ಮಾತ್ರ ಇರುವ ಸಂಘಟನೆಯಾಗಿದೆ. ನಾನು ಹೇಳಿರುವ ಅಂಶಗಳನ್ನು ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಈಗ ಪಾಕಿಸ್ತಾನದಲ್ಲಿರುವ ತಮ್ಮ ಜನ್ಮಭೂಮಿ ಕರಾಚಿ ಬಗ್ಗೆಯೂ ಮಾತನಾಡಿರುವ ಅಡ್ವಾಣಿ, ಕರಾಚಿ ಹಾಗೂ ಸಿಂಧ್ ಪ್ರದೇಶ ಈಗ ಭಾರತದ ಭಾಗವಾಗಿಲ್ಲ. ಆದರೆ ಸಿಂಧ್ ಇಲ್ಲದೇ ಭಾರತ ಅಪೂರ್ಣವಾಗಿ ಕಾಣುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 
ನಾನು ಬಾಲ್ಯದಲ್ಲಿ ಕರಾಚಿಯಲ್ಲಿ ಆರ್ ಎಸ್ಎಸ್ ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ. ಆದರೆ ಕರಾಚಿ ಹಾಗೂ ಸಿಂಧ್ ಪ್ರದೇಶ ಈಗ ಭಾರತದ ಭಾಗ ಅಲ್ಲ ಎಂಬುದನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ.  ಸಿಂಧ್ ಇಲ್ಲದೇ ಭಾರತ ಅಪೂರ್ಣ ಎನಿಸುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ. 
SCROLL FOR NEXT