ಕೋಲ್ಕತಾ: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿನ ಹಿಂಸಾಚಾರ ಘಟನೆಗಳ ನಂತರ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಸ್ವತಂತ್ರ ವಿಚಾರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಪ್ರೆಸಿಡೆನ್ಸಿ ವಿವಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಬೌದ್ಧಿಕ ಮತ್ತು ಸಾಮಾಜಿಕ ಸಂಪ್ರದಾಯಗಳನ್ನು ಖಂಡಿಸುವ ಜ್ಞಾನ ಸೇರಿದಂತೆ ಎಲ್ಲಾ ರೀತಿಯ ಜ್ಞಾನ ಸಂಪಾದನೆಗೆ ಪ್ರತಿ ವಿಶ್ವವಿದ್ಯಾಲಯವೂ ಸ್ವಾತಂತ್ರ್ಯ ನೀಡಬೇಕು ಮತ್ತು ಈ ಸ್ವಾತಂತ್ರ್ಯದ ಉತ್ಸಾಹವನ್ನು ನಾವು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ಶೈಕ್ಷಣಿಕ ನೇಮಕಾತಿಯಲ್ಲಿನ ರಾಜಕೀಯ ಹಸ್ತಕ್ಷೇಪವನ್ನು ಪ್ರಸ್ತಾಪಿಸಿದ ಮನಮೋಹನ್ ಸಿಂಗ್ ಅವರು, ಇತ್ತೀಚಿಗೆ ದೆಹಲಿ ಮತ್ತು ಹೈದರಾಬಾದ್ ವಿವಿಗಳ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲೂ ಹಸ್ತಕ್ಷೇಪ ಮಾಡಲು ಯತ್ನಿಸಿದ್ದು ತುಂಬಾ ಕಳವಳಕಾರಿ ವಿಚಾರ ಎಂದರು.
ಶಾಂತಿಯುತ ವಿರೋಧ ಅಥವಾ ಪ್ರತಿಭಟನೆಗಳನ್ನು ಹತ್ತಿಕ್ಕುವ ಯತ್ನಗಳು ಕೇವಲ ಕಲಿಕೆ ಮೇಲೆ ಮಾತ್ರ ಪರಿಣಾಮ ಬೀರಲ್ಲ. ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದ ಸಿಂಗ್, ನಾವು ಪ್ರತಿ ವಿಶ್ವವಿದ್ಯಾಲಯ ಸ್ವಾಯತ್ತತೆಯನ್ನು ರಕ್ಷಿಸಲು ಬಹಳ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.