ದೇಶ

ತಪ್ಪಾಗಿ ನಾನು ಯಾವುದೇ ಹೇಳಿಕೆಯನ್ನು ನೀಡಿಲ್ಲ; ಶರದ್ ಯಾದವ್

Manjula VN

ಪಾಟ್ನ: ಮಗಳ ಮಾನಕ್ಕಿಂತ ಓಟಿನ ಮಾನ ದೊಡ್ಡದು ಎಂದು ಹೇಳುವ ಮೂಲಕ ತೀವ್ರ ವಿರೋಧಕ್ಕೆ ಕಾರಣರಾಗಿರುವ ಜನತಾ ದಳ(ಯು) ನಾಯಕ ಶರದ್ ಯಾದವ್ ಅವರು ತಮ್ಮ ಹೇಳಿಕೆ ಕುರಿತಂತೆ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆಯಷ್ಟೇ ಪಾಟ್ನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶರದ್ ಯಾದವ್ ಅವರು, ಮಗಳ ಗೌರವಕ್ಕೆ ಧಕ್ಕೆಯಾದರೆ, ಆಕೆಯ ನೆರೆಹೊರೆಯವರ ಮತ್ತು ಗ್ರಮಾದ ಗೌರವಕ್ಕೆ ಹಾನಿಯಾಗುತ್ತದೆ. ಆದರೆ, ಹಣಕ್ಕಾಗಿ ನಿಮ್ಮ ಮತವನ್ನು ಮಾರಿಕೊಂಡರೆ ಅದರಿಂದ ದೇಶಕ್ಕೆ ಗೌರವಕ್ಕೆ ಧಕ್ಕೆಯಾಗುತ್ತದೆ. ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ ನಿಮ್ಮ ಒಂದು ಮತದ ಗೌರವ ನಿಮ್ಮ ಮಗಳ ಗೌರವಕ್ಕಿಂತಲೂ ಮಿಗಿಲಾದದ್ದು ಎಂದು ಹೇಳಿದ್ದರು. ಈ ಹೇಳಿಕೆಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ.

ಇನ್ನು ತಮ್ಮ ಹೇಳಿಕೆ ಸಂಬಂಧ ಶರದ್ ಯಾದವ್ ಅವರು ಇಂದು ಸ್ಪಷ್ಟನೆ ನೀಡಿದ್ದು, ಮತ ಹಾಗೂ ಮಗಳು ಎರಡೂ ಗೌರವಯುತ ವಿಚಾರಗಳಾಗಿವೆ. ನಾನು ತಪ್ಪಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಪ್ರತೀಯೊಬ್ಬರೂ ಆಲೋಚನಾ ವಿಧಾನಗಳು ವಿಭಿನ್ನವಾಗಿರುತ್ತವೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡವರು ಇತರರಿಗೂ ತಪ್ಪಾಗಿ ಮಾಹಿತಿಯನ್ನುನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರತೀ ಪೋಷಕರಿಗೂ ಮಗಳೆಂದರೆ ಬಹಳ ಇಷ್ಟವಿರುತ್ತದೆ. ಇದರಂತೆಯೇ ಮತಗಳೂ ಕೂಡ ಜನರಿಗೆ ಮೌಲ್ಯಯುತವಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ಇಂಜಿನ್ ಗಳಿದ್ದಂತೆ. ದೇಶ ಮುನ್ನಡೆಯಲು ಜನರೇ ಚಲನಾಶಕ್ತಿಯಾಗಿರುತ್ತಾರೆ. ಇಡೀ ಸಮಾಜವೇ ಮತಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಮತಗಳು ಹಾಗೂ ಮಗಳನ್ನು ಒಂದೇ ರೀತಿಯಲ್ಲಿ ನೋಡಬೇಕು ಎಂದು ತಿಳಿಸಿದ್ದಾರೆ.

SCROLL FOR NEXT