ಚಂಡೀಗಢ: ಪಂಜಾಬ್ ಚುನಾವಣೆಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ಅದು ಶಿರೋಮಣಿ ಅಕಾಲಿ ದಳಕ್ಕೆ ಮತ ಹಾಕಿದಂತೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಹಾಗೂ ಶಿರೋಮಣಿ ಅಕಾಲಿದಳ ಪಕ್ಷಗಳನ್ನು ಮೂಲಭೂತವಾದಿ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳೆಂದು ಹೇಳಿರುವ ಅಮರಿಂದರ್ ಸಿಂಗ್, ಎಚ್ಚರಿಕೆಯಿಂದ ಮತ ಚಲಾವಣೆ ಮಾಡುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಅಕಾಲಿದಳದವರು 10 ವರ್ಷಗಳಿಂದ ಪಂಜಾಬ್ ರಾಜ್ಯವನ್ನು ಲೂಟಿ ಮಾಡುತ್ತಿದ್ದರೆ ಆಮ್ ಆದ್ಮಿ ಪಕ್ಷ ಪಂಜಾಬಿಯತ್ ನ್ನು ಹಾಳು ಮಾಡಲು ಹೊರಗಿನಿಂದ ಜನರನ್ನು ಕರೆಸಿದೆ ಎಂದು ಸಾರ್ವಜನಿಕ ಸಭೆಯಲ್ಲಿ ಆರೋಪಿಸಿದ್ದಾರೆ.
ಅಕಾಲಿ ದಳದ ಆಡಳಿತದಲ್ಲಿ ಜನತೆ ಸಾಕಷ್ಟು ನೊಂದಿದ್ದಾರೆ. ಪಂಜಾಬ್ ನ್ನು ಲೂಟಿ ಮಾಡಿರುವ ಪ್ರಕಾಶ್ ಸಿಂಗ್ ಬಾದಲ್ ಕ್ಷೇತ್ರದಿಂದಲೇ ಸ್ಪರ್ಧಿಸಿ ಪಾಠ ಕಲಿಸಲಿದ್ದೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.