ದೇಶ

ಬಜೆಟ್ ಅಧಿವೇಶನದಲ್ಲಿ ಕುಸಿದು ಬಿದ್ದ ಮಾಜಿ ಸಚಿವ ಇ.ಅಹ್ಮದ್

Manjula VN

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕೇರಳದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಇ. ಅಹ್ಮದ್ ಅವರು ದಿಢೀರನೇ ಕುಸಿದುಬಿದ್ದಿದ್ದಾರೆಂದು ಮಂಗಳವಾರ ವರದಿಗಳು ತಿಳಿಸಿವೆ.

ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು. ವಿತ್ತ ಸಚಿವ ಅರುಣ್ ಜೇಟ್ಲಿ 2017-18ನೇ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಭಾಷಣ ಮಾಡುತ್ತಿದ್ದರು. ಭಾಷಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಹ್ಮದ್ ಅವರು ಕುಳಿತುಕೊಂಡಿದ್ದ ಸ್ಥಳದಿಂದಲೇ ಕುಸಿದು ಬಿದ್ದಿದ್ದಾರೆಂದು ತಿಳಿದುಬಂದಿದೆ.

ಅಹ್ಮದ್ ಅವರು ಕುಸಿದು ಬೀಳುತ್ತಿದ್ದಂತೆಯೇ ಕೂಡಲೇ ಅವರನ್ನು ಸ್ಟ್ರೆಚರ್ ನಲ್ಲಿ ಸಂಸತ್ತಿನಿಂದ ಹೊರಗೆ ಕರೆದುಕೊಂಡು ಹೋಗಿ ರಾಮ್ ಮನೋಹರ್ ಲೋಹಿಯಾ (ಆರ್'ಎಂಎಲ್) ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಸ್ತುತ ಅಹ್ಮದ್ ಅವರು ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.

ಐಯುಎಂಎಲ್ ನ ರಾಷ್ಟ್ರೀಕ ಅಧ್ಯಕ್ಷರಾಗಿರುವ 78 ವರ್ಷದ ಇ. ಆಹ್ಮದ್ ಅವರು ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ವಿದೇಶಾಂಕ ಸಚಿವಾಲಯದ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಲ್ಲಪ್ಪುರಂ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

SCROLL FOR NEXT