'ಗೋರಕ್ಷಕರ' ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಅಲ್ಪಸಂಖ್ಯಾತರಲ್ಲಿ ವಿಶೇಷವಾಗಿ ಮುಸ್ಲಿಂರನ್ನು ಮತ್ತು ದಲಿತರನ್ನು ತೀವ್ರ ಆತಂಕಕ್ಕಿಡು ಮಾಡಿದೆ.
ಇಂಡಿಯಾಸ್ಪೆಂಡ್.ಕಾಮ್(ಅಂಕಿ ಸಂಖ್ಯೆ ಪತ್ರಿಕೋದ್ಯಮ ಸೈಟ್) ಪ್ರಕಾರ, 2010ರಿಂದ ಗೋರಕ್ಷಕರಿಂದ ಇದುವರೆಗೆ ನಡೆದ ದಾಳಿಗಳಲ್ಲಿ ಶೇ.86ರಷ್ಟು ಮುಸ್ಲಿಮರು ಮೃತಪಟ್ಟಿದ್ದಾರೆ ಮತ್ತು 2014ರ ನಂತರ ಶೇ.95ರಷ್ಟು ದಾಳಿ ನಡೆದಿವೆ. 2016ರಲ್ಲಿ ಒಟ್ಟು 25 ದಾಳಿಗಳು ನಡೆದಿದ್ದು, 2017ರಲ್ಲಿ ಕೇವಲ ಆರೇ ತಿಂಗಳ ಅವಧಿಯಲ್ಲಿ 17 ದಾಳಿಗಳು ನಡೆದಿವೆ.
ಕಳೆದ ಜನವರಿಯಿಂದ ಜೂನ್ 2017ರವರೆಗೆ ನಡೆದ ದಾಳಿಗಳ ವಿವರ ಇಲ್ಲಿದೆ
ಏಪ್ರಿಲ್ 1, ರಾಜಸ್ಥಾನ : ಇಲ್ಲಿನ ಅಲ್ವಾರ್ನ ಹೆದ್ದಾರಿಯ ಬಳಿ ರೈತ ಪೆಹ್ಲು ಖಾನ್ ಮತ್ತು ಇತರ ನಾಲ್ವರು ಮುಸ್ಲಿಮರ ಮೇಲೆ ಉದ್ರಿಕ್ತ ಗುಂಪೊಂದು ಹಲ್ಲೆ ನಡೆಸಿದೆ. ಇದಾದ ಎರಡು ದಿನಗಳ ನಂತರ ಖಾನ್ ಮೃತಪಟ್ಟಿದ್ದಾರೆ.
ಏಪ್ರಿಲ್ 22, ದೆಹಲಿ: 15 ಜನರ ಗೋ ರಕ್ಷಕರ ತಂಡವೊಂದು ಎಮ್ಮೆಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಯುವಕರ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಅಶು, ಕಮಿಲ್ ಹಾಗೂ ರಿಜ್ವಾನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು.
ಏಪ್ರಿಲ್ 22, ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ರಾಯ್ಸಿ ಜಿಲ್ಲೆಯಲ್ಲಿ ಗೋರಕ್ಷಕರು ಕುಟುಂಬವೊಂದರ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ 9 ವರ್ಷದ ಬಾಲಕಿ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಏಪ್ರಿಲ್ 28, ಕರ್ನಾಟಕ: ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಗೋಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ 13 ಗೋರಕ್ಷಕರ ತಂಡ ಮೂವರು ಬುಡಕಟ್ಟು ಯುವಕರ ಹಾಗೂ ಅವರ ಕುಟುಂಬದ ಮೇಲೆ ದಾಳಿ ನಡೆಸಿದ್ದರು.
ಏಪ್ರಿಲ್ 30, ಅಸ್ಸಾಂ : ಅಸ್ಸಾಂನ ನಾಗಾಂವ್ನಲ್ಲಿ ದನ ಕಳ್ಳತನ ನಡೆಸಿದ ಅನುಮಾನದ ಅಡಿ ಅಬು ಹನೀಫಾ ಮತ್ತು ರಿಯಾಜುದ್ದೀನ್ ಅಲಿ ಎನ್ನುವವರನ್ನು ಗುಂಪೊಂದು ಹತ್ಯೆ ಮಾಡಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ.
ಮೇ 14, ಮಧ್ಯ ಪ್ರದೇಶ: ಮಧ್ಯಪ್ರದೇಶದ ಉಜೈನಿಯಲ್ಲಿ ಗೋರಕ್ಷಕರ ತಂಡ ವ್ಯಕ್ತಿಯೊಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿತ್ತು.
ಮೇ 22, ರಾಜಸ್ಥಾನ: ಜೈಪುರದ ಹೋಟೆಲ್ ಹಯಾತ್ ರಬ್ಬಾನಿಯಲ್ಲಿ ಗೋಮಾಂಸ ನೀಡಲಾಗಿದೆ ಎಂದು ಆರೋಪಿಸಿ ಇಬ್ಬರು ಹೋಟೆಲ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು.
ಮೇ 26, ಮಹಾರಾಷ್ಟ್ರ: ಮಾರಾಷ್ಟ್ರದ ಮಾಲೇಗಾಂವನಲ್ಲಿ ಗೋಮಾಂಸ ಹೊಂದಿದ್ದ ಅನುಮಾನದ ಅಡಿ ಗೋರಕ್ಷಕ ದಳದವರು ಇಬ್ಬರು ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಜೂನ್ 22, ಹರಿಯಾಣ : ಹರಿಯಾಣದಲ್ಲಿ ರೈಲೊಂದರಲ್ಲಿ ಜುನೈದ್ ಖಾನ್ ಎನ್ನುವ 15 ವರ್ಷ ವಯಸ್ಸಿನ ಹುಡುಗನನ್ನು ಚಾಕುವಿನಿಂದ ಇರಿದು ಕೊಲ್ಲಲಾಯಿತು. ಚಾಕುವಿನಿಂದ ಇರಿಯುವ ಮೊದಲು ಜುನೈದ್ನನ್ನು ‘ಗೋಮಾಂಸ ತಿನ್ನುವವ’ ಎಂದು ನಿಂದಿಸಲಾಯಿತು. ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ
ಜೂನ್ 27, ಜಾರ್ಖಂಡ್ : ಪಶುಸಂಗೋಪನೆಯಲ್ಲಿ ತೊಡಗಿದ್ದ ರೈತ ಉಸ್ಮಾನ್ ಅನ್ಸಾರಿ ಅವರ ಮನೆಯ ಹೊರಗೆ ಸತ್ತ ದನ ಸಿಕ್ಕಿತ್ತು ಎನ್ನಲಾದ ನಂತರ, ಅಂದಾಜು ನೂರು ಜನರ ಗುಂಪು ಅನ್ಸಾರಿ ಮೇಲೆ ಹಲ್ಲೆ ನಡೆಸಿತು. ಅವರ ಮನೆಯ ಒಂದು ಭಾಗಕ್ಕೆ ಬೆಂಕಿ ಹಚ್ಚಿತು. ದಾಳಿ ನಡೆಸಿದವರು ತಮ್ಮ ಮೇಲೆ ಕಲ್ಲು ತೂರಿದ್ದಾರೆ, ಐವತ್ತು ಜನ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು, ಪತ್ರಕರ್ತರ ಬಳಿ ಹೇಳಿದ್ದಾರೆ.
ಜೂನ್ 24, ಪಶ್ಚಿಮ ಬಂಗಾಳ : ರಾಜ್ಯದ ಉತ್ತರ ದಿನಾಜ್ಪುರದಲ್ಲಿ ಗೋವು ಕಳ್ಳತನ ಮಾಡಿದ್ದಾರೆ ಎಂದು ಉದ್ರಿಕ್ತರ ಗುಂಪೊಂದು ನಾಸಿರ್ ಉಲ್ ಹಕ್, ಮೊಹಮ್ಮದ್ ಸಮೀರುದ್ದೀನ್ ಮತ್ತು ಮೊಹಮ್ಮದ್ ನಾಸೀರ್ ಎನ್ನುವ ಮೂವರು ಕಟ್ಟಡ ಕಾರ್ಮಿಕರನ್ನು ಹೊಡೆದು ಕೊಂದಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಮೂವರನ್ನು ಬಂಧಿಸಲಾಗಿದೆ.
ಜೂನ್ 29, ಜಾರ್ಖಂಡ್ : ರಾಂಚಿ ಸಮೀಪದ ರಾಮಗಡದಲ್ಲಿ ಅಲಿಮುದ್ದೀನ್ ಅನ್ಸಾರಿ ಎಂಬ ವ್ಯಾಪಾರಿಯನ್ನು ಉದ್ರಿಕ್ತ ಜನರ ಗುಂಪೊಂದು ಹತ್ಯೆ ಮಾಡಿತು. ತಾವು ಹಿಂಸೆಯನ್ನು ವಿರೋಧಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಗಂಟೆಗಳ ನಂತರ ಈ ಹತ್ಯೆ ನಡೆಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos