ದೇಶ

ಕೋಮು ಘರ್ಷಣೆ ಪ್ರಕರಣ: ಪಶ್ಚಿಮಬಂಗಾಳ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

Manjula VN
ಕೋಲ್ಕತಾ: ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಗಲಭೆ ಪ್ರಕರಣಕ್ಕೆ ಸಂಬಬಂಧಿಸಿದಂತೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಸೂಚನೆ ನೀಡಿದೆ. 
ಫೇಸ್ ಬುಕ್ ನಲ್ಲಿ ಯುವಕನೊಬ್ಬ ಆಕ್ಷೇಪಾರ್ಹ ಬರಹಗಳನ್ನು ಹಾಕಿದ್ದ. ಯುವಕನ ಪೋಸ್ಟ್ ಗೆ ಹಲವು ವಿರೋಧಗಳು ವ್ಯಕ್ತವಾಗಿದ್ದವು. ನಂತರ ಪೊಲೀಸರು ಯುವಕನನ್ನು ಬಂಧನಕ್ಕೊಳಪಡಿಸಿದ್ದರು. ಇದಾದ ಬಳಿಕ ಪಶ್ಚಿಮ ಬಂಗಾಳದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆ ಸಂಭವಿಸಿತ್ತು. ಘರ್ಷಣೆಯನ್ನು ಹತ್ತಿಕ್ಕುವ ಸಲುವಾಗಿ ರಾಜ್ಯ ಸರ್ಕಾರ 400 ಅರೆಸೇನಾ ಪಡೆಗಳನ್ನು ನಿಯೋಜಿಸಿತ್ತು. 
ಕೋಮು ಘರ್ಷಣೆಯಿಂದಾಗಿ ಬಡುರಿಯಾದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೀಶಾ ಮಾರುಕಟ್ಟೆ, ಬನ್ಷಾತ, ರಾಮಚಂದ್ರಪುರ ಮತ್ತು ಟೆಂಟುಲಿಯಾ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಘಟನೆ ಬಳಿ ಕೆಲವೆಡೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಪ್ರಕರಣ ಸಂಬಂಧ ಕೂಡಲೇ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ. 
SCROLL FOR NEXT