ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಅವರ ದೆಹಲಿಯ ಸೈನಿಕ್ ಫಾರ್ಮ್ ನಲ್ಲಿರುವ ನಿವಾಸದ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ. ಇದೀಗ ದಾಳಿ ದೆಹಲಿಯ ಮೂರು ಕಡೆಗಳಲ್ಲಿ ನಡೆಯುತ್ತಿದೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಮಿಸಾ ಭಾರ್ತಿಯವರನ್ನು ಬಂಧಿಸಿತ್ತು.
ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪು ಹಣ ಸಂಗ್ರಹಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಕಳೆದ ಸೋಮವಾರ ರಾಜೇಶ್ ಅಗರ್ವಾಲ್ ಅವರನ್ನು ಬಂಧಿಸಲಾಗಿತ್ತು.
ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿದ ಒಂದು ದಿನದ ಬಳಿಕ ಜಾರಿ ನಿರ್ದೇಶನಾಲಯ ದೆಹಲಿಯಲ್ಲಿರುವ ಮಿಲಾ ಭಾರ್ತಿ ಅವರ ಒಡೆತನದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದೆ.
ಇಂದು ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳು ದೆಹಲಿಯ ಘಿತೋರ್ನಿ, ಬಿಜ್ವಾಸನ್ ಮತ್ತು ಸೈನಿಕ್ ಫಾರ್ಮ್ ಗಳ ಮೇಲೆ ದಾಳಿ ಮಾಡಿದೆ.
ಲಾಲೂ ಪ್ರಸಾದ್ ಯಾದವ್ ಕುಟುಂಬ ಭಾಗಿಯಾಗಿದೆ ಎನ್ನಲಾಗಿರುವ ಬೇನಾಮಿ ಭೂ ವ್ಯವಹಾರ ಮತ್ತು ತೆರಿಗೆ ವಂಚನೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಲಾಲೂ ಅವರ ಪುತ್ರಿ ಸಂಸದೆ ಮಿಸಾ ಭಾರ್ತಿ ಮತ್ತು ಆಕೆಯ ಪತಿ ಶೈಲೇಶ್ ಕುಮಾರ್ ಅವರನ್ನು ವಿಚಾರಣೆ ನಡೆಸಲು ಬಯಸಿದ್ದು ಆದರೆ ಅವರಿಬ್ಬರೂ ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸುರೇಂದ್ರ ಕುಮಾರ್ ಜೈನ್ ಮತ್ತು ಆತನ ಸೋದರ ವಿರೇಂದ್ರ ಜೈನ್ ಅವರ ಸಹಾಯದಿಂದ ಸಂಶಯಾಸ್ಪದ ವ್ಯವಹಾರಗಳ ಮೂಲಕ ಕಪ್ಪು ಹಣವನ್ನು ಸಕ್ರಮಗೊಳಿಸುತ್ತಿದ್ದ ಆರೋಪ ಅಗರ್ಲಾಲ್ ಮೇಲಿದೆ. ಜಾರಿ ನಿರ್ದೇಶನಾಲಯ ಜೈನ್ ಸಹೋದರರನ್ನು ಕಳೆದ ಮಾರ್ಚ್ 20ರಂದು ಬಂಧಿಸಿತ್ತು.
ನಾಲ್ಕು ನಗರಗಳಲ್ಲಿ ನಿನ್ನೆ ಸಿಬಿಐ ಭ್ರಷ್ಟಾಚಾರ ಕೇಸಿಗೆ ಸಂಬಂಧಪಟ್ಟಂತೆ ದಾಳಿ ನಡೆಸಿ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು.
ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಭಾರತೀಯ ರೈಲ್ವೆಯ ಅಂಗವಾದ ಐಆರ್ ಸಿಟಿಸಿಯ ಎರಡು ಹೊಟೇಲ್ ಗಳನ್ನು ನಿರ್ವಹಣೆ ಮಾಡಲು ಗುತ್ತಿಗೆ ನೀಡಿ ಹಣದ ಅಕ್ರಮ ವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos