ನವದೆಹಲಿ: ಬಿಹಾರದ ಮಹಾ ಮೈತ್ರಿ ಕೂಟದಿಂದ ಒಂದು ವೇಳೆ ಸಿಎಂ ನಿತೀಶ್ ಕುಮಾರ್ ಹೊರಬಂದರೆ ತಮ್ಮ ಪಕ್ಷ ಜೆಡಿಯು ಗೆ ಬಾಹ್ಯ ಬೆಂಬಲ ನೀಡುವುದಾಗಿ ಬಿಜೆಪಿ ಹೇಳಿದೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಬಿಜೆಪಿ ಮುಖಂಡ ನಿತ್ಯಾನಂದ ರಾಯ್, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜಿನಾಮೆ ನೀಡದಿದ್ದರೇ ನಿತೀಶ್ ಕುಮಾರ್ ಅವರೇ ಆತನನ್ನು ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಹೇಳಿಕೆಯಿಂದ ಬಿಹಾರ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ, ನಿತೀಶ್ ಮಹಾ ಮೈತ್ರಿಯಿಂದ ಹೊರ ಬಂದರೇ ಬಿಜೆಪಿ ಬಾಹ್ಯ ಬೆಂಬಲ ನೀಡುತ್ತದೆ, ಆದರೆ ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿರುವ ಅವರು ಮುಂದಿನ ನಿರ್ಧಾರವನ್ನು ಕೇಂದ್ರ ಬಿಜೆಪಿ ನಾಯಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ,
ಲಾಲೂ ಪ್ರಸಾದ್ ಯಾದವ್ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಜೆಡಿಯು ಪಕ್ಷ ಮೌನ ವಹಿಸಿದ್ದು ಆರ್'ಜೆಡಿ ಗೆ ತೀವ್ರ ಮುಜುಗರ ಉಂಟಾಗಿದೆ. ಕೇಂದ್ರ ಸರಕಾರದೊಂದಿಗೆ ನಿತೀಶ್ ಕುಮಾರ್ ಶಾಮೀಲಾಗಿ ತಮ್ಮ ವಿರುದ್ಧ ಪಿತೂರಿ ಮಾಡಿರಬಹುದೆಂಬುದು ಲಾಲೂ ಶಂಕೆ. ಲಾಲೂ ಪುತ್ರ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಭ್ರಷ್ಟಾಚಾರದ ಆರೋಪ ಮಾಡಿದೆ. ತೇಜಸ್ವಿ ಯಾದವ್ ತಲೆದಂಡಕ್ಕೆ ಬಿಹಾರದಾದ್ಯಂತ ಒತ್ತಾಯ ಕೇಳಿಬರುತ್ತಿದೆ.