ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಆರೋಪಿ ಮತ್ತು ದೋಷಾರೋಪ ಪಟ್ಟಿಯಲ್ಲಿರುವ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಾವಧಿ ನಿಷೇಧಾಜ್ಞೆ ವಿಧಿಸಲಾಗುವುದು ಎಂಬ ನಿಯಮ ಹೇರಿದ್ದ ಚುನಾವಣಾ ಆಯೋಗ ಇದೀಗ ಉಲ್ಟಾ ಹೊಡೆದಿದೆ.
ಶಾಶ್ವತ ನಿಷೇಧ ಹೇರುವುದಿಲ್ಲ ಬದಲಾಗಿ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ರಾಜಕೀಯವನ್ನು ನಿರ್ಣಯಿಸುವುದಕ್ಕೆ ಚುನಾವಣಾ ಆಯೋಗ ಬೆಂಬಲ ನೀಡಿದೆ.
ಈ ಹಿಂದೆ ಚುನಾವಣಾ ಆಯೋಗ, ಅಪರಾಧ ಹಿನ್ನೆಲೆಯುಳ್ಳ ರಾಜಕೀಯ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಬೆಂಬಲ ಸೂಚಿಸಿತ್ತು.
ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಚುನಾವಣಾ ಆಯೋಗ, ಆರೋಪಿ ಸಂಸದರು ಮತ್ತು ಶಾಸಕರ ವಿಚಾರಣೆ ನ್ಯಾಯಾಲಯದಲ್ಲಿ ಒಂದು ವರ್ಷದೊಳಗೆ ಮುಗಿದ ನಂತರ ಅವರಿಗೆ ಜೀವಾವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ಆದೇಶ ನೀಡಬೇಕೆಂದು ಅಶ್ವಿನಿ ಉಪಾಧ್ಯಾಯ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿರೋಧಾಭಾಸವಿದೆ ಎಂದು ಹೇಳಿದೆ.
ಪ್ರಸ್ತುತ ಇರುವ ಕಾನೂನಿನಂತೆ ಒಬ್ಬ ಶಾಸಕ ಅಥವಾ ಸಂಸದ ಅಪರಾಧಿ ಎಂದು ಸಾಬೀತಾದರೆ 6 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಬಗ್ಗೆ ಅನೇಕರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಶಾಸಕಾಂಗ ವ್ಯವಸ್ಥೆಯಲ್ಲಿ ಕೂಡ ನ್ಯಾಯಾಂಗ ಮತ್ತು ಕಾರ್ಯಾಂಗದಂತೆ ಜೀವಾವಧಿ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ.