ದೇಶ

ವಿಜಯ್ ಮಲ್ಯರನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ಶಿಕ್ಷೆ ಪ್ರಮಾಣ ಪ್ರಕಟ: ಸುಪ್ರೀಂ

Lingaraj Badiger
ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಶುಕ್ರವಾರ ಹೇಳಿ ಸುಪ್ರೀಂ ಕೋರ್ಟ್ ಪ್ರಕರಣ ವಿಚಾರಣೆಯನ್ನು ಮುಂದೂಡಿದೆ.
ವಿವಿಧ ಬ್ಯಾಂಕ್ ಗಳಿಂದ 9 ಸಾವಿರ ಕೋಟಿ ರುಪಾಯಿ ಸಾಲ ಪಡೆದು ಅದನ್ನು ಮರು ಪಾವತಿಸದೇ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ್ ಮಲ್ಯ ಅವರು ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಆದರೆ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವ ಕಾರಣ ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಡಿಸೆಂಬರ್ 4ರೊಳಗೆ ಲಂಡನ್ ಕೋರ್ಟ್ ನಲ್ಲಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ದೇಶ, ವಿದೇಶಗಳಲ್ಲಿರುವ ಆಸ್ತಿ ವಿವರ ಸಲ್ಲಿಸಲು ಹಾಗೂ ಕೋರ್ಟ್ ಗೆ ಹಾಜರಾಗಲು ವಿಫಲವಾಗಿದ್ದ ವಿಜಯ್ ಮಲ್ಯ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್`ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇ 9ರಂದು ಮಲ್ಯ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.
ನ್ಯಾಯಾಂಗ ನಿಂದನೆ ಆರೋಪದಡಿ ಶಿಕ್ಷೆಗೊಳಗಾದವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 2,000 ರುಪಾಯಿ ದಂಡ ಅಥವಾ ಎರಡೂ ವಿಧಿಸುವ ಸಾಧ್ಯತೆಯಿದೆ.
SCROLL FOR NEXT