ದೇಶ

ಜಿಎಸ್ ಟಿ ಪರಿಕಲ್ಪನೆಯಡಿ ಮುಂಗಾರು ಅಧಿವೇಶನ ಕಲಾಪ ನಡೆಯುವ ವಿಶ್ವಾಸ: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಇಂದು ಸಂಸತ್ತು ಮುಂಗಾರು ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಲ್ಲಾ ಪಕ್ಷಗಳು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಜಿಎಸ್ ಟಿಯ ಹುರುಪಿನೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. 
ಸರಕು ಮತ್ತು ಸೇವಾ ತೆರಿಗೆ ಜಾರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಜಿಎಸ್ ಟಿಯ ಪರಿಕಲ್ಪನೆ ಒಟ್ಟಿಗೆ ಬಲವಾಗಿ ಬೆಳೆಯುವುದಾಗಿದೆ (Growing Stronger Together). ಜಿಎಸ್ ಟಿ ಜಾರಿಯಿಂದ ಮುಂಗಾರು ಅಧಿವೇಶನ ಉತ್ಸಾಹದಿಂದ ತುಂಬಿರುತ್ತದೆ ಎಂದು ಭಾವಿಸುತ್ತೇನೆ. ಎಲ್ಲಾ ಪಕ್ಷಗಳು, ಸಂಸದರು ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದರು.
ಮೊದಲ ಮಳೆ ಮಣ್ಣಿನ ಆಹ್ಲಾದಕರ ವಾಸನೆಯನ್ನು ಹೊರಸೂಸುವಂತೆ ಸರಕು ಮತ್ತು ಸೇವಾ ತೆರಿಗೆ ಯಶಸ್ವಿ ಜಾರಿಯು ಹೊಸ ಭರವಸೆ ಮತ್ತು ಉತ್ಸಾಹಗಳೊಂದಿಗೆ ಅಧಿವೇಶನವನ್ನು ತುಂಬಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಜಿಎಸ್ ಟಿಯಂತೆ ಒಟ್ಟಿಗೆ ಶಕ್ತಿವಂತರಾಗಿ ಬೆಳೆಯುವ ಉತ್ಸಾಹವನ್ನು ಮುಂಗಾರು ಅಧಿವೇಶನ ಮೂಡಿಸಲಿದೆ ಎಂದು ಪ್ರಧಾನಿ ಆಶಿಸಿದರು. ಈ ಬಾರಿಯ ಅಧಿವೇಶನದ ಆರಂಭ ದಿನವೇ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಉಪ ರಾಷ್ಟ್ರಪತಿ ಚುನಾವಣೆ ಕೂಡ ಅಧಿವೇಶನ ಮುಕ್ತಾಯಕ್ಕೆ ಮುನ್ನ ನಡೆಯಲಿದೆ. ಆಗಸ್ಟ್ 9ಕ್ಕೆ ಕ್ವಿಟ್ ಇಂಡಿಯಾ ಚಳವಳಿ ನಡೆದು 75 ವರ್ಷ ತುಂಬಲಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು.
ಈ ಬಾರಿಯ ಕಲಾಪದಲ್ಲಿ ವಿರೋಧ ಪಕ್ಷಗಳು ಚೀನಾ ವಿವಾದ, ಜಮ್ಮು-ಕಾಶ್ಮೀರ ಮತ್ತು ದಾರ್ಜಿಲಿಂಗ್ ನಲ್ಲಿನ ಅಸ್ಥಿರತೆ, ಸರಕು ಮತ್ತು ಸೇವಾ ತೆರಿಗೆಯ ಪರಿಣಾಮ ಮತ್ತು ಇತರ ವಿಷಯಗಳ ಕುರಿತು ಆಡಳಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಮುಂಗಾರು ಅಧಿವೇಶನ ಆಗಸ್ಟ್ 11ಕ್ಕೆ ಮುಕ್ತಾಯಗೊಳ್ಳಲಿದೆ.
SCROLL FOR NEXT